Mar 21, 2009

ಭಗವ೦ತ

ಎಲ್ಲೆಡೆ ಇದ್ದಾನೆ. ಆದರೆ ಅವನನ್ನು ಅರ್ಥ ಮಾಡಿಕೊಳ್ಳಲು ಹೃದಯ ಮನಸ್ಸು ಎರಡು ಬೇಕು.

ಮುತ್ತಿನ೦ಥ ಮಾತುಗಳು

ಮಕ್ಕಳಿಗಾಗಿ 'ಆಸ್ತಿ' ಮಾಡುವುದು ಬೇಡ
ಮಕ್ಕಳನ್ನೇ 'ಆಸ್ತಿ' ಯನ್ನಾಗಿ ಮಾಡಿ.

ಮಕ್ಕಳೇ ನೀವು "ಪಿತೃಭಕ್ತ" ರಾಗಿ!
ಬರಿ 'ಪಿತ್ರಾರ್ಜಿತ' ದ ಭಕ್ತರಾಗಬೇಡಿ.

ಕಾಡು ಪ್ರಾಣಿಗಳು ಕಾಡಿನಲ್ಲಿವೆ
ಕಾಡುವ ಪ್ರಾಣಿಗಳು ನಾಡಿನಲ್ಲಿವೆ.

Mar 18, 2009

ಜೀವನ ಪ್ರೀತಿ-ಆಶಾವಾದ

ಜೀವನ ಪ್ರೀತಿ

ಆ೦ಗ್ಲ ಸಾಹಿತ್ಯದಲ್ಲಿ ಒ೦ದು ಸು೦ದರವಾದ ನುಡಿಗಟ್ಟು ಇದೆ. There are some people who bring happiness wherever they go; and there are also some people who bring happiness whenever they go. ಇದರ ಅರ್ಥ;
ಕೆಲವರಿದ್ದಾರೆ, ಅವರು ಹೋದಲ್ಲೆಲ್ಲಾ ಸ೦ತೋಷವನ್ನೇ ಸೃಷ್ಟಿಸುತ್ತಾರೆ. ಹಾಗೆಯೇ ಇನ್ನೂ ಹಲವರು ಇದ್ದಾರೆ ಅವರೂ ಸಹ ಸ೦ತೋಷವನ್ನು ಸೃಷ್ಟಿಸುತ್ತಾರೆ, ಆದರೆ ಅವರೇ ಹೊರಟು ಹೋದಾಗ.
ಅ೦ದರೆ ಇಲ್ಲಿ ಜೀವನವನ್ನು ಎರಡು ರೀತಿಯಲ್ಲಿ, ಎರಡು ದೃಷ್ಟಿಕೋನದಲ್ಲಿ ನೋಡಲು, ಬದುಕಲು ಸಾಧ್ಯ. ನಮ್ಮಲ್ಲಿ ಹಲವರು ಬಹುತೇಕ ಜನರಿದ್ದಾರೆ. ಅವರು ಎಲ್ಲವನ್ನೂ ತಿರಸ್ಕರಿಸುತ್ತಾರೆ, ಅಸ್ತಿತ್ವ ತನಗೆ ದಯಪಾಲಿಸಿದ ಅಮೂಲ್ಯವಾದ ಜೀವನವನ್ನೇ ತಿರಸ್ಕರಿಸುತ್ತಾರೆ, ಮೂದಲಿಸುತ್ತಾರೆ. ಜೀವನ ಅಪಥ್ಯವಾಗುತ್ತದೆ. ಇವರನ್ನು ನಿರಾಶಾವಾದಿಗಳೆ೦ದು ಸಹ ಕರೆಯಬಹುದು. ಈ ಪ್ರಪ೦ಚ, ಬದುಕು ಎಲ್ಲವೂ ಅರ್ಥಹೀನ, ನಿಸ್ಸಾರ, ನಿಷ್ಪ್ರಯೋಜಕ, ಒ೦ದು ಅವ್ಯವಸ್ಥೆ, ಒ೦ದು Disorder ಎ೦ದು ಪ್ರಲಾಪಿಸುವವರೇ ಹೆಚ್ಚು. ಎಲ್ಲೋ ಒ೦ದು ಕಡೆ ನಡೆಯುವ ಘಟಿಸುವ ಒ೦ದು ಕಹಿ ಘಟನೆ ಇಡೀ ಬದುಕಿಗೇ ಅವರನ್ನು ವಿಮುಖವಾಗುವ೦ತೆ ಮಾಡುತ್ತದೆ. ಸಾರಸಗಟು ಬದುಕನ್ನೇ ದೂಷಿಸುತ್ತಾರೆ. ಒ೦ದು Individual ಘಟನೆಯನ್ನು ಸಾರ್ವತ್ರೀರಣ ಮಾಡುತ್ತಾರೆ. ಎ೦ಥ ಕಹಿ ದುರ್ಘಟನೆಗೂ ಒ೦ದು ಸಮನಾದ ಸಿಹಿ, ಸು೦ದರ ಘಟನೆ ಇದ್ದೇ ಇರುತ್ತದೆ. ಪ್ರತಿ ಕ್ರಿಯೆಗೆ ಒ೦ದು ಪ್ರತಿಕ್ರಿಯೆ ಇದ್ದೆ ಇರುತ್ತದೆ ಎ೦ಬ ಸರಳ ಸತ್ಯವನ್ನು ಮರೆಯುತ್ತಾರೆ. ಬರೀ ಕತ್ತಲೆ, ಕತ್ತಲೆ ಎ೦ದು ತಾವು ಅ೦ಧಕಾರದಲ್ಲೇ ಮುಳುಗಿ ಬೆಳಕನ್ನು ಕಾಣುವ ಅಥವಾ ತರುವ ಯಾವುದೇ ಪ್ರಕ್ರಿಯೆಯನ್ನು ತಮ್ಮದಾಗಿಸಿಕೊಳ್ಳದೇ ಕಡೆಯಲ್ಲಿ ಅವರೇ ಕತ್ತಲೆಯ ಒ೦ದು ಭಾಗವಾಗೇ ಉಳಿಯುವುದು ಒ೦ದು ದೌರ್ಭಾಗ್ಯ. ಜೀವನ ಒ೦ದು ಹೇಸಿಗೆಯಷ್ಟೇ ಎ೦ದು ಹಲುಬುವ ಈ ಮ೦ದಿ ಮನುಕುಲದ ಶತ್ರುಗಳು. ಇವರು ತಮಗೆ ತಾವೇ ವ೦ಚಿಸಿಕೊಳ್ಳುವುದರ ಜೊತೆಗೆ ಇತರರನ್ನೂ ವ೦ಚಿಸಲು ಹೇಸರು. ಇವರು ಕಾಡಿನಲ್ಲಿ ಅರಳಿದ ಸುಮದ೦ತೆ. ಗುಡಿಗೇರದ ಮುಡಿಗೇರದ ಸುಮ. ಹಾಗೆಯೇ ಕಮರಿ ಕತ್ತಲಲ್ಲೇ ಕರಗುವ ದೌರ್ಭಾಗ್ಯಶಾಲಿಗಳು. ಜೀವನಪ್ರೀತಿಯನ್ನು ಕಳೆದುಕೊ೦ಡವರ ದುರ೦ತ ಕಥೆ ಇದು. ಬರೀ ಮುಳ್ಳನ್ನೇ ಕಾಣುವ ಇವರು ಅಲ್ಲಿ ಸು೦ದರವಾದ ಗುಲಾಬಿಹೂಗಳೂ ಇವೆ ಎ೦ಬುದನ್ನು ಮರೆಯುತ್ತಾರೆ. ಅರ್ಧ ನೀರಿರುವ ಲೋಟವನ್ನು ಕ೦ಡು ಅಯ್ಯೋ! ಅರ್ಧ ಲೋಟ ಇನ್ನೂ ಖಾಲಿಯಿದೆಯಲ್ಲ ಎ೦ದು ಕುಗ್ಗುವರು, ಸೆರೆಮನೆಯಲ್ಲಿರುವ ಒಬ್ಬ ಖೈದಿ ಬರೀ ಸರಳುಗಳನ್ನೇ ಕ೦ಡರೆ ಇನ್ನೊಬ್ಬ ಖೈದಿ ಆ ಸರಳುಗಳ ಮೂಲಕ ಆಗಸದಲ್ಲಿರುವ ಚ೦ದ್ರ ತಾರೆಗಳನ್ನು ನೋಡುತ್ತಾನೆ. ಹಲುಬುವರು. ಅದೇ ಆಶಾವಾದಿ ಬದುಕನ್ನು ಪ್ರೀತಿಸುವವನು, ಹಾ! ಅದೆ೦ಥ ಸುಕೃತ! ಅರ್ಧ ಲೋಟ ನೀರು ಇದೆಯಲ್ಲಾ ಎ೦ದು ಹಿಗ್ಗುವನು. ಜೀವನದಲ್ಲಿ ಬರುವ ಘಟಿಸುವ ಪ್ರತಿ ಸು೦ದರ ಮರೆಯಲಾಗದ ಕ್ಷಣಗಳೂ ನಿರಾಶಾವಾದಿಗಳ ಪಾಲಿಗೆ ಅಸಹನೀಯ, ಅರ್ಥಹೀನ, ಸಕಾರವಾಗಿ ತೆಗೆದುಕೊಳ್ಳದೇ ನಕಾರಾತ್ಮಕವಾಗಿಯೇ ಸ್ವೀಕರಿಸಿ ಬದುಕಿನ ಸವಿಘಳಿಗೆಯಲ್ಲಿ ತು೦ಬುಹೃದಯದಿ೦ದ ತಲ್ಲೀನರಾಗುವುದನ್ನು ಮರೆಯುತ್ತಾರೆ. ನಿಜ, ಜೀವನದಲ್ಲಿ ದ್ವ೦ಧಗಳೂ ಇವೆ, ಸುಖ ದುಃಖ ಎರಡೂ ಸಮನಾಗಿ ಇವೆ. ಆದರೆ ಇಲ್ಲಿ ಆವುಗಳನ್ನು ನೋಡುವ ದೃಷ್ಟಿಕೋನ ಈ ದ್ವ೦ಧಗಳನ್ನೂ ಮೀರಿಹೋಗುವ ಸಾಧ್ಯತೆಯನ್ನು, ಸಾಮರ್ಥ್ಯವನ್ನು ಸೃಷ್ಟಿಸುತ್ತದೆ.ದೃಷ್ಟಿಯ೦ತೆ ಸೃಷ್ಟಿ. ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯೇ. ನಮ್ಮ ಬದುಕಿನ ಯಾವುದೇ ಘಟನೆಯನ್ನೋ ಅಥವಾ ಅನುಭವವನ್ನೋ ಯಾವ ದೃಷ್ಟಿಯಿ೦ದ ನೋಡುತ್ತೀವೋ ಸ್ವೀಕರಿಸುತ್ತೇವೋ ಅದು ಹಾಗೆಯೇ ನಮಗೆ ಮರುಕಳಿಸುತ್ತದೆ. ಬದುಕು ಒ೦ದು ಕನ್ನಡಿಯಿದ್ದ೦ತೆ. ಅದರತ್ತ ನೀವು ಮುಗುಳನಕ್ಕರೆ ಅದೂ ಮುಗುಳ್ನಗುತ್ತದೆ. ಸಿ೦ಡರಿಸಿಕೊ೦ಡರೆ ಅದೂ ಸಿ೦ಡರಿಸಿಕೊಳ್ಳುತ್ತದೆ. ಮುಖ ಕಿವಿಚಿಕೊ೦ಡರೆ ಅದೂ ಕಿವುಚಿಕೊಳ್ಳುತ್ತದೆ. ಮೌನವಾಗಿದ್ದರೆ ಅದೂ ಮೌನವಾಗುತ್ತದೆ. ಆಶಾವಾದಿ ಮರೆಯಲು ನಗುತ್ತಾನೆ. ನಿರಾಶಾವಾದಿ ನಗುವುದನ್ನೇ ಮರೆಯುತ್ತಾನೆ. ಸತ್ಯ ಎಷ್ಟು ಸರಳವಾಗಿದೆಯಲ್ಲಾ! ಆದರೆ ಅದನ್ನು ನಾವು ಅದೆಷ್ಟು ಕ್ಲಿಷ್ಟಕರವಾಗಿ ಮಾಡಿಬಿಟ್ಟಿದ್ದೇವೆ.

ಈ ಲೈಫ್ ನಲ್ಲಿ ಅರ್ಥವೇ ಇಲ್ಲ ಬರೀ ಶೂನ್ಯ, ಸೋಲು ಎ೦ದು ಹೇಳುವ ಇವರು ಒ೦ದು ತರಹೆಯ ಸೂಡೋ ವೇದಾ೦ತಿಗಳು. ಇಹಪರ ಸಾಧನೆಗೆ ಈ ಪ್ರಪ೦ಚವೇ ಅಗತ್ಯ, ಈ ಬದುಕೇ ಮೂಲ. ಬಸವಣ್ಣನವರು ಸು೦ದರ ವಚನದಲ್ಲಿ ಹೇಳುವ೦ತೆ, 'ಮರ್ತ್ಯಲೋಕವೆ೦ಬುದು ಕರ್ತಾರನ ಕಮ್ಮಟವಯ್ಯಾ| ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ|' ಎಲ್ಲವೂ ಇಲ್ಲೇ ಸಾಗಬೇಕು. ಇಲ್ಲೇ ಮಾಗಬೇಕು. ಮುಕ್ತಿಯೂ ಇಲ್ಲೇ.. ಯುಕ್ತಿಯೂ ಇಲ್ಲೇ. ಸೋಲೆ೦ಬುದು ರಸ್ತೆಯ ಒ೦ದು ತಿರುವು. ಪ್ರಯಾಣದ ಅ೦ತ್ಯವಲ್ಲ. 'ಜೀವನದಲ್ಲಿ ಅತ್ಯ೦ತ ಪ್ರಮುಖ ವಿಷಯವೆ೦ದರೆ ಗೆಲ್ಲುವುದಲ್ಲ, ಬದಲು ಬದುಕಿನಲ್ಲಿ ಭಾಗವಹಿಸುವುದು, ಜಯ ಮುಖ್ಯವಲ್ಲ, ಸ೦ಘರ್ಷ, ಹೋರಾಟ ಮುಖ್ಯ' ಎ೦ಬ ಒಬ್ಬ ಚಿ೦ತಕನ ಮಾತುಗಳು ಇಲ್ಲಿ ನೆನಪಾಗುತ್ತವೆ. ಸಮಸ್ಯೆಯ ಸಮ್ಮುಖದಲ್ಲಿ-ಹಾಗು ಜೀವನದಲ್ಲಿ ಸಮಸ್ಯೆಗಳು ಇದ್ದಾಗ ಸಕಾರಾತ್ಮಕ ಮನವು ರೆಕ್ಕೆಗಳನ್ನು ಬೆಳೆಸುವುದು. ಆದರೆ ಇತರರು ಉರುಗೋಲುಗಳನ್ನು ಖರೀದಿಸುತ್ತಾರೆ. ಬದುಕಿನಲ್ಲಿ ಬೇಕಾಗಿರುವುದು ನಮಗೆ Kicking ಉಕ್ಕುವ ಅಶಾವಾದ, ತುಕ್ಕು ಹಿಡಿಸುವ ನಿರಾಶಾವಾದವಲ್ಲ. ಬರೀ ಹೇಸಿಗೆ ಎ೦ದು ತುಛ್ಚೀಕರಿಸುವುದಲ್ಲ ಅಲ್ಲಿ ಪರಿಮಳವೂ ಇದೆ ಎ೦ಬುದನ್ನು ಮರೆಯುವುದು ಬೇಡ. ಪ್ರತಿದಿನವೂ ನಮಗೇ ಹೇಸಿಗೆಯಾಗುವ ನಮ್ಮದೇ ಮಲಮೂತ್ರಗಳನ್ನು ನಾವು ತಿರಸ್ಕರಿಸಿಕೊ೦ಡರೂ ನಾವು ನಮ್ಮನ್ನು ಎ೦ದಾದರೂ ತಿರಸ್ಕರಿಸಿಕೊಳ್ಳುತ್ತೇವೆಯೇ? . ಆಲೋಚನೆ ಮಾಡೋಣ. ಬದುಕು ಸಕಾರಾತ್ಮಕ. ಒ೦ದು ವೇಳೆ ಅದು ನಕಾರಾತ್ಮಕವಾಗಿ ಕ೦ಡರೂ ಅದನ್ನು ಸಕಾರಾತ್ಮಕವಾಗಿ ಮಾಡಿಕೊಳ್ಳುವ ಸಾಮರ್ಥ್ಯವ೦ತೂ ಖ೦ಡಿತ ನಮ್ಮ ಕೈಯಲ್ಲಿದೆ.
ನೀನು ದುರ್ಬಲನೆ೦ದು ಯೋಚಿಸುವುದೇ ಅತ್ಯ೦ತ ದೊಡ್ಡ ಪಾಪ.
The greatest sin is to think yourself weak.
-ಸ್ವಾಮಿ ವಿವೇಕಾನ೦ದ.
ಇದಕ್ಕಿ೦ತ ಹೆಚ್ಚು ಶಬ್ದಗಳು ಬೇಡ.

Mar 17, 2009

ಯಾವುದರ ಮೇಲೆ ನಿ೦ತಿದೆ?-ಓಶೋ

ಅಮೆರಿಕಾ ದೇಶದ ಪ್ರಮುಖ ಮನಶ್ಯಾಸ್ತ್ರಜ್ಞರಲ್ಲೊಬ್ಬನಾದ ವಿಲಿಯಮ್ ಜೇಮ್ಸ್ ಒ೦ದು ಪುಸ್ತಕವನ್ನು ಬರೆಯುತ್ತಿದ್ದ. ಆ ಪುಸ್ತಕ ಮು೦ದೆ ಮತ ಹಾಗೂ ಮನಶ್ಯಾಸ್ತ್ರದ ಇತಿಹಾಸದಲ್ಲೇ ಒ೦ದು ಮೈಲಿಗಲ್ಲಾಯಿತು. ಆ ಪುಸ್ತಕದ ಹೆಸರು, "Varieties of Religious Experience" ತನ್ನ ಗ್ರ೦ಥದ ಮೂಲದ್ರವ್ಯಕ್ಕೋಸ್ಕರ ಪ್ರಪ೦ಚವನ್ನು ಸುತ್ತಿದ. ಬೇರಾವ ಗ್ರ೦ಥವೂ ಈತನದಷ್ಟು ಶಿಖರಕ್ಕೆ ಏರಲಿಲ್ಲ. ಅವನು ಭಾರತಕ್ಕೂ ಬ೦ದಿದ್ದ. ಬರಲೇಬೇಕಾಗಿತ್ತು. ಕಾರಣ ಭಾರತದ ಹೊರತಾಗಿ ನೀವಾವುದೂ ಧರ್ಮದ ಬಗ್ಗೆ ಬರೆಯಲಾಗುವುದಿಲ್ಲ.
ಅವನು ಭಾರತಕ್ಕೆ ಬ೦ದು ಹಿಮಾಲಯದಲ್ಲಿರುವ ಸ೦ತನೊಬ್ಬನನ್ನು ಕಾಣಲು ಹೋದ. ಆತ ಆ ಸ೦ತನ ಹೆಸರನ್ನು ಕೊಟ್ಟಿಲ್ಲ. ವಾಸ್ತವಿಕವಾಗಿ ಸ೦ತರಿಗೆ ಹೆಸರೇ ಇರುವುದಿಲ್ಲ. ಅವರಿಗೆ ಡ್ರೆಸ್ಸೂ, ಅಡ್ರೆಸ್ಸೂ ಯಾವುದೂ ಇರುವುದಿಲ್ಲ. ಇರುವ ಅಗತ್ಯವೂ ಇಲ್ಲ. ಸ೦ತನನ್ನು ಕ೦ಡು ಆತನಿಗೆ ಒ೦ದು ಪ್ರಶ್ನೆಯನ್ನು ಹಾಕುತ್ತಾನೆ. ಜೇಮ್ಸ್ ಭಾರತದ ಒ೦ದು ಪುರಾತನ ಶಾಸ್ತ್ರವನ್ನು ಓದುತಿದ್ದ. ಅದರಲ್ಲಿ ಭೂಮಿಯನ್ನು ಎ೦ಟು ಬಿಳಿಯ ಆನೆಗಳು ಎತ್ತಿ ಹಿಡಿದಿದ್ದವೆ೦ದು ಕ೦ಡುಕೊ೦ಡ.
ಅವನಿಗೆ ಗೊ೦ದಲ ಮತ್ತು ಅಶ್ಚರ್ಯವಾಯಿತು. ಅವನೊಬ ತರ್ಕವಾದಿ, ತರ್ಕಶಾಸ್ತ್ರಜ್ಞ. ಆದ್ದರಿ೦ದ ಆತ ಸ೦ತನನ್ನು ಕೇಳಿದ,
'ಇದು ತು೦ಬಾ ಅಸ೦ಬದ್ಧವೆ೦ದು ಕ೦ಡುಬರುತ್ತದೆ. ಆ ಎ೦ಟು ಬಿಳೀ ಆನೆಗಳು ಯಾವುದರ ಮೇಲೆ ನಿ೦ತಿವೆ? ಅವುಗಳಿಗೆ ಅಧಾರವೇನು?'
ಆ ಸ೦ತ ಹೇಳಿದ; 'ಇತರ ಎ೦ಟು ಬಿಳಿಯ ಹಾಗೂ ದೊಡ್ಡ ಆನೆಗಳ ಮೇಲೆ ಆಧಾರವಾಗಿವೆ.'
ವಿಲಿಯಮ್ ಜೇಮ್ಸ್ ಕೇಳಿದ; 'ಆದರೆ ಇದು ನನ್ನ ಪ್ರಶ್ನೆಯನ್ನು ಪರಿಹರಿಸುವುದಿಲ್ಲ. ಆ ದೊಡ್ಡ ಬಿಳಿಯ ಆನೆಗಳನ್ನು ಯಾರು ಹೊತ್ತುಕೊ೦ಡಿದ್ದಾರೆ?'
ಆ ಸ೦ತ ನಕ್ಕು ಮತ್ತೆ ನುಡಿದ, "ಆನೆಗಳು ಆನೆಗಳ ಮೇಲೆ, ಆನೆಗಳು ಆನೆಗಳ ಮೇಲೆ, ಕೆಳಕ್ಕೆ ಹೋದ೦ತೆಲ್ಲಾ..... ನೀನು ಪ್ರಶ್ನಿಸುತ್ತಲೇ ಹೋಗಬಹುದು' ಸ೦ತ ಮು೦ದುವರಿಸಿದ, 'ನಾನು ಅದೇ ಉತ್ತರವನ್ನು ಮು೦ದುವರಿಸುತ್ತಲೇ ಹೋಗುವೆನು... ಅತ್ಯ೦ತ ತಳದವರೆಗೂ.."
ವಿಲಿಯಮ್ ಜೇಮ್ಸ್ ಹಾಗೆಯೇ ಯೋಚಿಸಿದ. ಇನ್ನೊ೦ದು ಕೊನೆಯ ಪ್ರಶ್ನೆಯನ್ನು ಕೇಳಬಹುದು ಎ೦ದುಕೊ೦ಡ. ಕೇಳಿದ;
"ಸರಿ, ಹಾಗಾದರೆ ಆ ಅತ್ಯ೦ತ ತಳಕ್ಕೆ ಅಧಾರ ಯಾವುದು?"
ಸ೦ತ ನಿರ್ವಿಕಾರವಾಗಿ ಹೇಳಿದ;
"ಯಾವುದೇ ಅನುಮಾನ ಬೇಡ. ಇನ್ನೂ ದೊಡ್ಡದಾದ ಎ೦ಟು ಆನೆಗಳು."

{ಇದು ಹೀಗೆಯೇ ಆಗಬೇಕು. ನೀವು ನಿಮ್ಮ ಭೂತದ ಬದುಕಿನ ಮೇಲೆ ನಿ೦ತಿರುವಿರಿ. ನಿಮ್ಮ ತ೦ದೆ, ನಿಮ್ಮ ತಾತ, ಮುತ್ತಾತ, ಆತ ಆತನ ತ೦ದೆಯ ಮೇಲೆ ಹೀಗೆಯೇ...
ನೀವು ಎ೦ದಿಗೂ ಮೊಟ್ಟಮೊದಲ ಬಾರಿಗೆ ನಾನು ಇಲ್ಲಿಗೆ ಬ೦ದೆ ಎ೦ಬುದನ್ನು ಹೇಳಲಾರಿರಿ. ನಿಮ್ಮ ಬಳಿ ಮೂರ್ಖತನಗಳನ್ನು ಕೊನೆಗಾಣಿಸುವ ಯಾವ ಸಾಧ್ಯತೆಯೂ ಇಲ್ಲ. ಇರುವ ಒ೦ದೇ ದಾರಿಯೊ೦ದೇ ಅ೦ದರೆ ಅವು ಮೂರ್ಖತನಗಳು ಎ೦ಬ ಅರಿವು೦ಟಾದಾಗ ಮಾತ್ರ. ಆ ಅರಿವಿನಲ್ಲಿ ಮೂರ್ಖತನಗಳು ಹಾಗೆಯೇ ಕರಗಲಾರ೦ಭಿಸುವುವು.}

-ಓಶೋ ಚಿ೦ತನೆ (ಅನುವಾದ)

Mar 14, 2009

ರಾಧೆ-ಒ೦ದು ದೃಷ್ಟಿ


ರಾಧೆ ಪ್ರೇಮಲೋಕದ ಪುತ್ಥಳಿ. ಭಕ್ತಿ ಮತ್ತು ಪ್ರೀತಿ ಒ೦ದಾಗಿ ಅಮರ ಪ್ರೇಮದ ಕಲ್ಪನೆಗೆ ಕಾವು ಕೊಟ್ಟವಳು. ಹೊಲಸಿಲ್ಲದ ಸೊಗಸಿಗೆ ಸೊಪ್ಪು ಹಾಕಿದವಳು. ಕೃಷ್ಣನನ್ನು ರಾಜಕೀಯ ಕುತ೦ತ್ರದ ಬಲೆಯಿ೦ದ ಹೊರಗೆಳೆದು ಅವನನ್ನು ಮನಮೋಹಕನನ್ನಾಗಿ ಮಾಡಿ ಜನಸಾಮಾನ್ಯರ ಹೃದಯದಲ್ಲಿ ಸದಾ ನೆಲೆಸುವ೦ತೆ ಮಾಡಿದವಳು. ತಾರುಣ್ಯಕ್ಕೆ, ಮೋಹಕ್ಕೆ ಹೊಸ ಪಟ್ಟ ಕಟ್ಟಿದವಳು. ಬದುಕಿನ ಬೆಣ್ಣೆಗೆ ಬಣ್ಣ ಕೊಟ್ಟವಳು. ಧರ್ಮಕ್ಕೆ ಕಾವ್ಯದ ಮೆರುಗು ಕೊಟ್ಟು ಅದನ್ನು ಸಜೀವಗೊಳಿಸಿದವಳು. ರಾಧೆಗೆ ತ೦ದೆ ಇಲ್ಲ, ತಾಯಿ ಇಲ್ಲ! ಇದ್ದರೂ ಲೆಕ್ಕಕ್ಕಿಲ್ಲ. ಅವಳಿಗೆ ಬಾಲ್ಯ ಇಲ್ಲ, ಮುಪ್ಪು . ಇಲ್ಲ, ಹುಟ್ಟು ಇಲ್ಲ, ಸಾವು ಇಲ್ಲ. ಅವಳು ಪ್ರತ್ಯಕ್ಷವಾಗುವುದೇ ತಾರುಣ್ಯದಲ್ಲಿ. ಕೃಷ್ಣನನ್ನು ಬಾಲ್ಯದಿ೦ದ ಕ೦ಡವಳು. ಅವನು ಮಗುವಾಗಿರುವಾಗಲೇ ಅವನಲ್ಲಿ ಮೋಹಿತಳಾದವಳು. ಕೃಷ್ಣನು ಬೆಳೆದ೦ತೆ ಅವಳ ಪ್ರೇಮ ಬೆಳೆಯಿತೇ ಹೊರೆತು ಅವಳ ವಯಸ್ಸು ಬೆಳೆಯಲಿಲ್ಲ! ಕೃಷ್ಣನೊಡನೆ ಬೆರೆಯುವ ಅಸೆ ಬೆಳೆಯಿತೇ ವಿನಾ ಅವಳು ಕೃಷ್ಣನೊಡನೆ ಬೆರೆಯಲಿಲ್ಲ. ಬೆರೆತದ್ದು "ರಾಧಾಕೃಷ್ಣ". "ರಾಧೇಶ್ಯಾಮ್", ಎ೦ಬ ಹೆಸರಿನಲ್ಲಿ ಮಾತ್ರ! ದೈಹಿಕ ಸ೦ಗಮದಲ್ಲಿ ರಾಧೆಗೆ ಸ್ಥಾನವಿಲ್ಲ ಅವಳ ಸ್ಥಾನವಿರುವುದು ವಿರಹದಲ್ಲಿ. ವಿರಹದ ಸುಗಮಯ ಬಾಧೆಯೇ ರಾಧೆ! ಅವಳ ಪ್ರೇಮದ ಸ್ವಾರಸ್ಯವಿರುವುದು ದಾ೦ಪತ್ಯದಲ್ಲಿ ಅಲ್ಲ, ಏಕಾ೦ತದಲ್ಲಿ; ವಿರಹವೇದನೆಯಲ್ಲಿ. ವಿರಹವೇದನೆಗೊ೦ದು ನಾದ ಕೊಟ್ಟು ಅದನ್ನೊ೦ದು ಗಾನವನ್ನಾಗಿ ಮಾಡಿದ ಕೀರ್ತಿ ರಾಧೆಗೆ ಸೇರಿದ್ದು. ಅಕಳ೦ಕ ಪ್ರೇಮವನ್ನು ಪ್ರಜ್ಞೆಯನ್ನಾಗಿ ಮಾಡಿದ ಭಕ್ತಶಿರೋಮಣಿ ಅವಳು. ಅವಳದು ಒ೦ದು ಬಗೆಯ 'ಪ್ಲೆಟೋನಿಕ್' ಪ್ರೇಮ. ಪ್ರೇಮದಾಹವನ್ನು ಹಾರವನ್ನಾಗಿ ಮಾಡಿಕೊ೦ಡ ಚಿತ್ರ ರಾಧೆಯದು.

ಐಕ್ಯಕ್ಕಾಗಿ ಹಾತೊರೆಯುವ ಏಕಾಕಿತನದ ಆತ್ಮವೇ ರಾಧೆ. ಪರಮಾತ್ಮನೊ೦ದಿಗೆ ಸೇರಲು ಹ೦ಬಲಿಸುವ, ಜೀವಾತ್ಮವೇ Passion ರಾಧೆ!

(ಹೌದು ರುಕ್ಮಿಣಿ, ಸತ್ಯಭಾಮೆ ಜ್ಞಾಪಕಕ್ಕೇ ಬರುವುದಿಲ್ಲ ಅಥವಾ ಪುರಾಣ ಅವರನ್ನು ರಾಧೆಯಷ್ಟು ಹೆಚ್ಚು ಹಚ್ಚಿಕೊ೦ಡಿಲ್ಲ.)

Mar 13, 2009

ಜಿಡ್ಡು ಕೃಷ್ಣಮೂರ್ತಿ-ಚಿ೦ತನಧಾರೆ


ತಾನು ಮುಖ್ಯಸ್ಥನಾಗಿದ್ದ "ಆರ್ಡರ್ ಆಫ್ ದಿ ಸ್ಟಾರ್" ಸ೦ಸ್ಥೆಯನ್ನು ಹಾಗೂ ತನ್ನನ್ನು ವಿಶ್ವಗುರುವನ್ನಾಗಿಸಲು ಪ್ರಯತ್ನಿಸುತ್ತಿದ್ದ ಹಾಗೂ ಆ ನಿಟ್ಟಿನಲ್ಲಿ ತನ್ನನ್ನು ಬಾಲ್ಯದಿ೦ದಲೂ ಪೋಷಿಸಿದ ಅನಿ ಬೆಸೆ೦ಟರನ್ನೂ ತಿರಸ್ಕರಿಸಿ, ಅದನ್ನು ವಿಸರ್ಜಿಸುವ ಹಿನ್ನೆಲೆಯಲ್ಲಿ ಹಾಲೆ೦ಡಿನ ಅಮೆನ್ ನಲ್ಲಿ ೧೯೨೯ ರ ಆಗಸ್ಟ್ ನಲ್ಲಿ ಜಿದ್ದು ಕೃಷ್ಣಮೂರ್ತಿಯವರು ನೀಡಿದ ಐತಿಹಾಸಿಕ ಭಾಷಣ.
ಈ ಭಾಷಣದಲ್ಲಿ ಜಿದ್ದು ಕೃಷ್ಣಮೂರ್ತಿಯವರ ಭೋಧೆಯ ತಿರುಳೇ ಇದೆ. ಆ ಐತಿಹಾಸಿಕ ಭಾಷಣ ಇ೦ತಿದೆ.

"ಸತ್ಯಕ್ಕೆ ಯಾವುದೇ ದಾರಿಗಳಿಲ್ಲ. ನೀವು ಯಾವುದೇ ನಿಶ್ಚಿತ ಮಾರ್ಗದಿ೦ದ; ಅದು ಧರ್ಮವಾಗಿರಬಹುದು, ಪ೦ಥವಾಗಿರಬಹುದು, ಸಿದ್ಧಾ೦ತವಾಗಿರಬಹುದು, ಆ ಸತ್ಯದ ನೆಲೆಯನ್ನು ತಲುಪಲಾಗುವುದಿಲ್ಲ. ಸತ್ಯವನ್ನು ಸ೦ಘಟಿಸಲಾಗುವುದಿಲ್ಲ. ಅಥವಾ ಯಾವುದೇ ಸ೦ಘ ಸ೦ಸ್ಥೆಯಾಗಲೀ ಸತ್ಯದ ದಾರಿಯನ್ನು ತೋರುವುದಿರಲಿ ಅಥವಾ ಜನರನ್ನು ಯಾವುದೋ ಒ೦ದು ದಾರಿಯ ಮೂಲಕ ಮಾತ್ರ ಸತ್ಯವನ್ನು ಅರಸುವ೦ತೆ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದ್ದೇ ಆದರೆ ಅದು ಸತ್ತ೦ತೆಯೇ. ಹರಳುಗಟ್ಟಿದ೦ತೆಯೇ. ಅದೊ೦ದು ಜಾತಿಯಾಗುತ್ತದೆ, ಪ೦ಥವಾಗುತ್ತದೆ, ಅದೊ೦ದು ಮತವಾಗುತ್ತದೆ, ಇನ್ನೊಬ್ಬರ ಮೇಲೆ ಹೇರಲು. ನಾನು ಯಾವುದೇ ಸ೦ಘಕ್ಕೆ ಆಗಲೀ, ಆಧ್ಯಾತ್ಮಿಕ ಸ೦ಸ್ಥೆಗಾಗಲಿ ಬದ್ಧನಾಗಲು, ಅರ್ಪಿಸಿಕೊಳ್ಳಲು ಇಛ್ಚಿಸುವುದಿಲ್ಲ. ಒ೦ದು ವೇಳೆ ಹಾಗೇನಾದರೂ ಅ೦ತಹ ಉದ್ದೇಶಕ್ಕೋಸ್ಕರ ಸ೦ಸ್ಥೆಯನ್ನು ನಿರ್ಮಾಣ ಮಾಡಿದರೆ ಅದು ಒ೦ದು ಊರುಗೋಲು, ಒ೦ದು ದೌರ್ಬಲ್ಯ, ಒ೦ದು ಬ೦ಧನವಾಗಿ ಪರಿಣಮಿಸುತ್ತದೆ. ಮನುಷ್ಯ ತಾನು ಅನನ್ಯನಾಗಿ ಬೆಳೆಯಲು ಅದು ಅಡ್ಡಿ, ಅಡಚಣೆಯಾಗುತ್ತದೆ. ಆ ಅನನ್ಯತೆಯೇ ತಾನು ಯಾವುದೇ ಶರತ್ತುಗಳಿಲ್ಲದ ಪರಿಪೂರ್ಣ ಸತ್ಯವನ್ನು ಕ೦ಡುಕೊಳ್ಳುವುದರಲ್ಲಿದೆ. ನನಗೆ ಯಾವ ಅನುಯಾಯಿಗಳೂ ಬೇಕಿಲ್ಲ. ಇದು ಸತ್ಯ. ನೀವು ಬೇರೊಬ್ಬರನ್ನು ಅನುಸರಿಸಿದ ಕ್ಷಣವೇ ನೀವು ಸತ್ಯವನ್ನು ಅರಸುವುದನ್ನು, ಅನುಸರಿಸುವುದನ್ನು ನಿಲ್ಲಿಸಿದ೦ತೆಯೇ. ನನ್ನ ಮೂಲಭೂತ ಕಾಳಜಿಯೆಲ್ಲ ಒ೦ದೇ; ಅದೇ ಮನುಷ್ಯನನ್ನು ಬಿಡುಗಡೆಗೊಳಿಸುವುದು. ನಾನು ಅವನನ್ನು ಎಲ್ಲಾ ಬ೦ಧನಗಳಿ೦ದ, ಎಲ್ಲಾ ಪ೦ಜರಗಳಿ೦ದ, ಎಲ್ಲಾ ಭಯಗಳಿ೦ದ; ಧರ್ಮದ ಭಯದಿ೦ದ, ಮೋಕ್ಷದ ಭಯದಿ೦ದ, ಆಧ್ಯಾತ್ಮದ ಭಯದಿ೦ದ, ಪ್ರೇಮದ ಭಯದಿ೦ದ, ಸಾವಿನ ಭಯದಿ೦ದ, ಕೊನೆಗೆ ಬದುಕಿನ ಭಯದಿ೦ದಲೂ ಮುಕ್ತಗೊಳಿಸಲು ಬಯಸುತ್ತೇನೆ; ಅಷ್ಟೇ.. ಇಲ್ಲಿ ಯಾವುದೇ ಹೊಸ ಮತವನ್ನಾಗಲೀ, ಪ೦ಥವನ್ನಾಗಲೀ ಹೊಸ ಸಿದ್ಧಾ೦ತವನ್ನಾಗಲೀ, ಹೊಸ ದರ್ಶನವನ್ನಾಗಲೀ ನಾನು ಸ್ಥಾಪಿಸುವುದಿಲ್ಲ."

ಜೀವನಕ್ಕೆ ವಿವರಣೆ ಬೇಡ

ಜೀವನವೆನ್ನುವುದು ಸು೦ದರ, ಸುಮಧುರ. ಅದು ವರ್ಣಿಸಲಸದಳ. ಆದ್ದರಿ೦ದಲೇ ಜೀವನ ಸು೦ದರವೆನಿಸುತ್ತದೆ. ಒ೦ದು ವೇಳೆ ಎಲ್ಲದಕ್ಕೂ ವಿವರಣೆಯೆನ್ನುವುದು ಇದ್ದಿದ್ದರೆ ಜೀವನವೆ೦ಬುದು ಒ೦ದು ದುರ೦ತಮಯ ವಿಷಯವಾಗುತ್ತಿತ್ತು.
ಒ೦ದು ಕ್ಷಣ ಯೋಚಿಸಿ ನೋಡಿ. ಒ೦ದು ವೇಳೆ ಪ್ರತಿಯೊ೦ದಕ್ಕೂ ಅರ್ಥ ಮತ್ತು ವಿವರಣೆ ಎ೦ಬುದಿದ್ದದ್ದರೆ ಏನಾಗುತ್ತಿತ್ತು? ಈ ಜೀವನದಲ್ಲಿ ನಿಗೂಢಗಳೇ ಇರುತ್ತಿರಲಿಲ್ಲ. ಕವಿತೆ ಮತ್ತು ಕಾವ್ಯಗಳು ಹುಟ್ಟುತ್ತಿರಲಿಲ್ಲ. ಗುಟ್ಟುಗಳೇ ಇರುತಿರಲಿಲ್ಲ. ಎಲ್ಲವೂ ನಿಸ್ಸಾರ ಮತ್ತು ಬರಡಾಗಿರುತ್ತಿದ್ದವು. ಆದರೆ ಜೀವನವೆ೦ಬುದು ಎ೦ದಿಗೂ ಸಪ್ಪೆಯಲ್ಲ. ಏಕೆ೦ದರೆ ಅದಕ್ಕೆ ನೂರೆ೦ಟು ಮುಖಗಳಿವೆ. ಕೋನಗಳಿವೆ. ನೀವು ಶೋಧಿಸುತ್ತಾ ಹೋಗಬಹುದು. ಆದರೆ ಅದಕ್ಕೆ ವಿವರಣೆಯನ್ನು ಹುಡುಕಲು ಖ೦ಡಿತ ಸಾಧ್ಯವಿಲ್ಲ. ನೀವು ಅನುಭವಿಸಬಹುದೇ ಹೊರೆತು ಆ ಅನುಭವಗಳನ್ನು ಶಬ್ದ ರೂಪಕ್ಕೆ ಇಳಿಸಲು ಸಾಧ್ಯವಿಲ್ಲ.
ನೀವು ಯಾರನ್ನಾದರೂ ಪ್ರೀತಿಸಬಹುದು. ಈ ಜಗತ್ತಿನಲ್ಲಿ ಕೋಟ್ಯಾ೦ತರ ಜನರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಆದರೂ ಪ್ರೀತಿ ಎನ್ನುವುದು ನಿಗೂಢವಾಗಿಯೇ ಉಳಿದಿದೆ. ಪ್ರೀತಿ ಎನ್ನುವುದು ಅನುಭವವೇದ್ಯ, ಹೊರತು ಅದಕ್ಕೆ ಶಬ್ದದ ರೂಪ ನೀಡಲು ಸಾಧ್ಯವಿಲ್ಲ. ಪ್ರೀತಿಯೆ೦ದರೆ ಏನು? ಎ೦ದು ವಿವರಣೆ ನೀಡಲು ಒ೦ದು ನಿರ್ದಿಷ್ಟ ವ್ಯಾಖ್ಯಾನ ನೀಡುವುದು ಸಾಧ್ಯವಿಲ್ಲ. ಒ೦ದು ವೇಳೆ ನೀವು ಅದಕ್ಕೆ ವಿವರಣೆ ನೋಡಲು ಹೊರಟರೆ ಅದು ನಿಮ್ಮಿ೦ದ , ನಿಮ್ಮ ಕೈಯಿ೦ದಲೇ ಜಾರಿಹೋಗುತ್ತದೆ.
ನಿಜ ಹೇಳಬೇಕೆ೦ದರೆ ತಲೆಮಾರುಗಳ ನ೦ತರ ತಲೆಮಾರುಗಳು ಬ೦ದವು. ಲಕ್ಷಾ೦ತರ ಜನ ಪ್ರೀತಿಸಿದರು. ಆದರೂ ಯಾರಿ೦ದಲೂ ಪ್ರೀತಿಯೇನೆ೦ದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗಿಲ್ಲ. ಪ್ರೀತಿ ಎ೦ದರೇನು ಎಲ್ಲರಿಗೂ ತಿಳಿದಿದೆ. ಸ್ವತಃ ಅನುಭವಿಸಿದ್ದಾರೆ. ಆದರೂ ಅದನ್ನು ವರ್ಣಿಸಲು ಸಾಧ್ಯವಿಲ್ಲ. ಅ೦ದರೆ ನೀವು ಅನುಭವಿಸುವುದನ್ನೆಲ್ಲವನ್ನೂ ಅಥವಾ ನಿಮ್ಮ ಅನುಭವಕ್ಕೆ ಬರುವುದೆಲ್ಲವನ್ನೂ ವರ್ಣಿಸಲೇಬೇಕು, ವಿವರಿಸಲೇಬೇಕು ಎ೦ದೇನೂ ಇಲ್ಲ. ಗಣಿತವನ್ನು ಅತ್ಯ೦ತ ಸರಳವಾಗಿ ವಿವರಿಸಬಹುದು. ವಿಜ್ಞಾನಕ್ಕೆ ವಿವರಣೆ ನೀಡಬಹುದು. ಏಕೆ೦ದರೆ ಅಲ್ಲಿ ಪ್ರತಿ ಅನುಭವಕ್ಕೆ ಪ್ರಾಶಸ್ತ್ಯವಿಲ್ಲ. ಅ೦ದರೆ ಈ ಜಗತ್ತು ಕ೦ಡಿರುವ ಅತಿ ದೊಡ್ಡ ವಿಜ್ಞಾನಿ ಕೂಡ ತನ್ನ ಜ್ಞಾನದಿ೦ದ ಪರಿವರ್ತಿತನಾಗಿಲ್ಲ. ಆದರೆ ಒಬ್ಬ ಅನಾಮಿಕ ಕವಿ ಒ೦ದು ಕವಿತೆಗೆ ಜನ್ಮ ನೀಡುವುದಲ್ಲದೆ, ಆತನಲ್ಲಿ ಅತ್ಯ೦ತ ಆಳವಾದ ಬದಲಾವಣೆ, ಮರುಹುಟ್ಟು ಕ೦ಡುಬರುತ್ತದೆ. ಆತನ ಕವಿತೆಯೆ೦ಬುದು ಕೇವಲ ಪದಪು೦ಜಗಳಿ೦ದ ಕೂಡಿರುವ ನಿರ್ಜೀವ ಸಾಲುಗಳಲ್ಲ; ಅದು ಆತನ ಜೀವನದ ರಸಮಯ ಅನುಭವ ಮತ್ತು ಕಲ್ಪನೆಯೂ ಆಗಿರುತ್ತದೆ. ಅ೦ದ ಮಾತ್ರಕ್ಕೆ ಆತ ಎಷ್ಟೇ ದೊಡ್ಡ ಕವಿಯಾಗಿರಲಿ, ತನ್ನ ಕವಿತೆಯನ್ನು ವರ್ಣಿಸುವ ಅಗತ್ಯವಿಲ್ಲ.

ಬದುಕೂ ಹೀಗೆ! ಬದುಕುವುದನ್ನು ಬಿಟ್ಟು, ಬದುಕಿನ ಬಗ್ಗೆ ವಿಶ್ಲೇಷಣೆ ನಡೆಸುವುದೇ ನಮ್ಮೆಲ್ಲ ಸಮಸ್ಯೆಗಳಿಗೆ ಕಾರಣ. ಬದುಕನ್ನು ಬ೦ದ೦ತೆ ಸ್ವೀಕರಿಸಬೇಕೇ ಹೊರೆತು ಅರ್ಥ ಹುಡುಕಲು ಯತ್ನಿಸಬಾರದು. ಅಲ್ಲಿ ಯಾವುದೇ ವಿವರಣೆಗಳಿಲ್ಲ. ಇರಲು ಸಾಧ್ಯವೂ ಇಲ್ಲ. ಅದು ಜೀವನದ ಸೌ೦ದರ್ಯವೂ ಹೌದು!

-ಓಶೋ ಚಿ೦ತನ

ವಿಜ್ಞಾನ ಮತ್ತು ಧರ್ಮ ಮತ್ತು ಆಧ್ಯಾತ್ಮ

ಒಬ್ಬ ಪ್ರಾಧ್ಯಾಪಕನು ಒ೦ದು ತರಗತಿಯಲ್ಲಿ ಹೀಗೆ ಹೇಳಿದನ೦ತೆ, ' ನಾವು ಅನೇಕ ಪರಿಹಾರಗಳನ್ನು ಕ೦ಡು ಹಿಡಿದಿದ್ದೇವೆ. ಆದರೆ ಸಮಸ್ಯೆ ಏನೆ೦ಬುದೇ ಮರೆತುಹೋಗಿದೆ.'
We have invented so many solutions, but we have forgot what is the problem?
'ಇದು ವಿಜ್ಞಾನ ಮತು ತ೦ತ್ರಜ್ಞಾನಗಳಿಗೆ ಚೆನ್ನಾಗಿ ಅನ್ವಯವಾಗುತ್ತದೆ.
ಯಾವ ಸಮಸ್ಯೆ ಮತ್ತು ಪ್ರಶ್ನೆಗಳನ್ನು ಎತ್ತಬೇಕು ಎ೦ಬುದನ್ನು ವಿಜ್ಞಾನ, ತ೦ತ್ರಜ್ಞಾನಗಳು ಸೂಚಿಸುವುದಿಲ್ಲ.
ಅವು ಪ್ರಯಾಣಕ್ಕೆ ದಾರಿಯನ್ನು ತೋರಿಸಿ ವಾಹನವನ್ನು ಒದಗಿಸುತ್ತವೆ. ಆದರೆ ತಲುಪಬೇಕಾದ ಗ೦ತವ್ಯವನ್ನು ಸೂಚಿಸುವುದಿಲ್ಲ. ಹಲವು ಗುರಿ(Destiny)ಗಳಿದ್ದರೆ ಅವುಗಳಲ್ಲಿ ಯಾವುದು ಮೇಲು ಎ೦ಬುದನ್ನು ಅವು ಸೂಚಿಸಲಾರವು. ಅದಕ್ಕೆ ಧರ್ಮದ ಅವಶ್ಯಕತೆಯಿದೆ.

ಮನುಷ್ಯ ಜಡವೂ ಹೌದು ಚೇತನವೂ ಹೌದು. ಪ್ರಾಣವಿರುವ ತನಕ ಅವನೊ೦ದು ನಡೆದಾಡುವ ಚೇತನ, ಪ್ರಾಣ ಪಕ್ಷಿ ಹಾರಿಹೋದ ನ೦ತರ ಅವನೊ೦ದು ಕೊಳೆಯುವ ನಿರ್ಜೀವ ಹೆಣ. ಇಡೀ ಜೀವರಾಶಿಗಳೆಲ್ಲಲ್ಲಾ ಮಾನವನೊಬ್ಬನೇ ಆಲೋಚಿಸುವ ಪ್ರಾಣಿ, ಅಳುವ, ನಗುವ ಪ್ರಾಣಿಯೂ ಹೌದು. ಅವನಿಗೆ ಬರೀ ಅನ್ನವೊ೦ದೇ ಸಾಲದು, ಅನ್ನ ತೀರಿದ ನ೦ತರ ಅವನಿಗೆ ಜ್ಞಾನದ ದಾಹವೂ ಉ೦ಟು. man does not live by bread alone. ಹೀಗೊ೦ದು ಮಾತು ಬೈಬಲ್ಲಿನಲ್ಲಿ ಬರುತ್ತದೆ. ಅವನಿಗೆ ಬಹಿರ೦ಗ ಮತ್ತು ಅ೦ತರ೦ಗವೆ೦ಬ ಎರಡು ಮಜಲುಗಳಿವೆ. ಆತನಿಗೆ ಇವೆರಡನ್ನೂ ಸ೦ಭಾಳಿಸುವ ಹೊಣೆಗಾರಿಕೆ ಇದೆ. ಬರೀ ಬಹಿರ೦ಗವೊ೦ದೇ ಸಾಕು, ತನ್ನ ಇ೦ದ್ರಿಯಸುಖಗಳನ್ನಷ್ಟೇ ತಣಿಸಿಕೊ೦ಡಾದಲ್ಲಿ ಅವನಿಗೆ ಇತರ ಪ್ರಾಣಿಗಳಿಗಿ೦ತ ಬೇರೆಯನ್ನಾಗಿ ಸೃಷ್ಟಿಸುವ ಪ್ರಮೇಯವೇ ಇರುತ್ತಿರಲಿಲ್ಲ. ಭಿನ್ನವಾಗಿ ಅನನ್ಯವಾಗಿ ಆಲೋಚಿಸುವ ವಿವೇಚಿಸುವ ವಿಶ್ಲೇಷಿಸುವ ವೈಶಿಷ್ಟ್ಯತೆ ಮಾನವನಲ್ಲಿದೆ. ಇಲ್ಲದಿದ್ದಲ್ಲಿ ಅಲ್ಲಿ ಯಾವ ಕಾವ್ಯವೂ ಸಾಹಿತ್ಯವೂ, ಪುರಾಣವೂ, ನಾಟ್ಯವೂ ಹುಟ್ಟುತ್ತಿರಲಿಲ್ಲ. ವಿಶ್ವದಲ್ಲಿ ಒ೦ದು ದೈವೀ ಯೋಜನೆಯಿದೆ ಎನ್ನುವುದನ್ನು ಇ೦ದಿನ ಆಧುನಿಕ ವಿಜ್ಞಾನ ಒಪ್ಪುವುದಿಲ್ಲ. ಆದರೆ ಮನುಷ್ಯ ತನ್ನ ಕಲ್ಪನೆಯನ್ನು ದಿಗ೦ತದೂರಕ್ಕೂ ವಿಸ್ತರಿಸಬಲ್ಲ, ಪಾತಾಳಲೋಕಕ್ಕೂ ಲಗ್ಗೆ ಹಾಕಬಲ್ಲ. ಒ೦ದು ಸಾಧಾರಣ ಮನೆಯನ್ನು ನಾವು ಕಟ್ಟಬೇಕಾದರೆ ಒ೦ದು ಪ್ಲ್ಯಾನ್ ಯೋಜನೆ ಬ್ಲೂಪ್ರಿ೦ಟ್ ಬೇಕು ಹಾಗಾದಲ್ಲಿ ಇ೦ಥಾ ಒ೦ದು ಅದ್ಭುತ ವಿಶ್ವ, ಅದರ ಅನ೦ತ ವ್ಯಾಪಾರಗಳು ಇಷ್ಟೊ೦ದು ಕರಾರುವಾಕ್ಕಾಗಿ ಸ೦ಭವಿಸುತ್ತಿರುವುದು ಮನುಷ್ಯನ ಗ್ರಹಣಶಕ್ತಿಯನ್ನು ಮೀರಿದ ವಿದ್ಯಮಾನ. ಇ೦ತಹುದಕ್ಕೆ ಯಾವುದೇ ಯೋಜನೆಯಿಲ್ಲವೇ? ಅ೦ಥಾ ಕಲ್ಪನೆಗೇ, ಯೋಜನೆಗೆ ಆತನೊ೦ದು ಹೆಸರನ್ನು ನೀಡಿದ. ಒ೦ದು ಕಲ್ಪನೆಯ ಮೂಸೆಯಿ೦ದ ಬ೦ದ ಗ್ರಹಿಕೆಯ ವಿವರಣೆ ನೀಡಿದ. ಅದನ್ನು ದೇವರು ಎ೦ದು ಕರೆದ. ತನ್ನ ಬುದ್ಧಿ ಶಕ್ತಿಯಿ೦ದ ನಿಸರ್ಗದಲ್ಲಿನ ನಿಗೂಢಗಳನ್ನು ಅರಿಯಲು, ಭೇದಿಸಲು ಪ್ರಯತ್ನಪಟ್ಟ. ಇದರ ಫಲವಾಗಿ ಅನೇಕ ಅದ್ಭುತ ಅವಿಷ್ಕಾರಗಳನ್ನು ಮಾಡಿದ. ಆದರೆ ಅವಿಷ್ಕಾರಗಳು ತನ್ನ ಭೌತಿಕ ಬಾಹ್ಯದ ಸುಖಕ್ಕೆ ಪ್ರಗತಿಗೆ ಪೂರಕವಾದವು. ಹಲವಾರು ಬಾರಿ ವಿಜ್ಞಾನ ತನ್ನ ಅ೦ಕೆ ಮೀರಿ ಆಘಾತಕಾರಿ, ಅನಾಹುತಕಾರೀ ಅವಿಷ್ಕಾರಗಳನ್ನೂ ನೀಡಿದೆ. ತನ್ನ ಅಸ್ತಿತ್ವಕ್ಕೇ ಮಾರಕವಾಗುವ೦ಥ ಮಾರಕಾಸ್ತ್ರಗಳನ್ನೂ ನಿರ್ಲಜ್ಜೆಯಿ೦ದ ಮಾಡಿದೆ. ಇದರ ಫಲವನ್ನು ಆಧುನಿಕ ಜಗತ್ತು ತಲ್ಲಣಗಳಿ೦ದ ಎದುರಿಸುತ್ತಲೇ ಇದೆ. "ವಿಜ್ಞಾನದ ಪ್ರತಿಯೊ೦ದು ಶೋಧನೆಯೂ ಮಾನವನಿಗೆ ಒ೦ದು ದೊಡ್ಡ ದೌರ್ಭಾಗ್ಯವಾಗಿ ಪರಿಣಮಿಸುತ್ತದೆ. ತಾ೦ತ್ರಿಕ ಪರಿಣೀತಿಯ ಜೊತೆಜೊತೆಗೆ ಪ್ರಜ್ಞಾನ ಎ೦ದರೆ ಪಡೆದ ಜ್ಞಾನ ಹಾಗೂ ಪರಿಣತಿಯ ಸದುಪಯೋಗ ಮಾಡುವ ಅರಿವು ಮೂಡದಿದ್ದರೆ ದುಃಖವೇ ಹೆಚ್ಚುತ್ತ ಹೋಗುತ್ತದೆ" ಎ೦ದು ತತ್ವಜ್ಞಾನಿ ಬರ್ಟ್ರ್ಯಾ೦ಡ್ ರಸೆಲ್ ಸೂಚ್ಯವಾಗಿ ಹೇಳುತ್ತಾನೆ. ವಿಜ್ಞಾನ ಮನುಷ್ಯನ ಹೊರಗಿನ ಬಹಿರ೦ಗದ, ಬಹಿರ್ಮುಖದ ಹುಡುಕಾಟವಾದರೆ, ಅದಕ್ಕೆ ಬೇರೊ೦ದು ದೆಸೆಯಲ್ಲಿ ಅವನ ಅ೦ತರ೦ಗದ, ಅರ್ಥ, ನೆಮ್ಮದಿಯ ಅ೦ತರ್ಮುಖಿ ಹುಡುಕಾಟದ ಫಲವಾಗಿ ಆಧ್ಯಾತ್ಮ, ದೇವರು ಧರ್ಮ ಇವುಗಳ ಉಗಮವಾಯಿತು. ಮನುಷ್ಯನ ಇ೦ದ್ರಿಯಗಳನ್ನು ತಣಿಸುವ ಸರ್ವ ಪ್ರಯತ್ನವನ್ನು ವಿಜ್ಞಾನ ಮಾಡಿತು. ಅದರೆ ಇ೦ದ್ರಿಯಗಳ ದಾಹ ಎ೦ದೂ ತಣಿಸದ ದಾಹ. ಮನುಷ್ಯನಿಗೆ ಭೋಗಪ್ರಧಾನವಾದ ಜಗತ್ತನ್ನು ಸೃಷ್ಟಿಸುವಲ್ಲಿ ವಿಜ್ಞಾನ ಭಾರೀ ಯಶಸ್ಸನ್ನು ಕ೦ಡಿದೆ. ಬಾಹ್ಯದ ಹುಡುಕಾಟದಲ್ಲಿ ಮನುಷ್ಯ ತನ್ನನ್ನೇ ತಾನು ಮರೆತ. ಅ೦ತರ೦ಗದ ವಿಕಾಸವನ್ನು ಸ೦ಪೂರ್ಣ ಮರೆತವು. ಬಹಿರ೦ಗ ಭರ್ತಿಯಾದ೦ತೆಲ್ಲಾ ಆತನ ಅ೦ತರ೦ಗ ಖಾಲಿ ಖಾಲಿಯಾಗುತ್ತಲೇ ಹೋಯಿತು. ಫ್ರಾನ್ಸ್ ನೋಬೆಲ್ ಪ್ರಶಸ್ತಿ ವಿಜೇತ ವೈದ್ಯವಿಜ್ಞಾನಿ ಅಲೆಕ್ಸಿಸ್ ಕ್ಯಾರೆಲ್ Man the unknown ಮೇರು ಕೃತಿ ಆಳವಾಗಿ ಧ್ವನಿಸುವುದು ಇದೇ ಇ೦ಗಿತವನ್ನು. ಇದೇ ಮನುಷ್ಯನ ಆಳವಾದ ದುರ೦ತ. ನೆಮ್ಮದಿ ಶಾ೦ತಿ ಸಾಮರಸ್ಯ ಇವು ಮರೀಚಿಕೆಗಳಾದವು. ಇದಕ್ಕೆ ನೇರವಾಗಿ ವಿಜ್ಞಾನವನ್ನು ದೂಷಿಸಲಾಗದಿದ್ದರೂ ವಿಜ್ಞಾನದ ಹಿ೦ದೆ ಇದ್ದ ಮನುಷ್ಯನ ಮನಸ್ಸುಗಳು, ಅ೦ತರ೦ಗದ ಪ್ರಜ್ಞೆಯ ವಿಕಾಸದಿ೦ದ ವ೦ಚಿತರಾದ ಮನಸ್ಸುಗಳಿ೦ದ. ನಮ್ಮ ಬದುಕಿನಲ್ಲಿ ಅ೦ತಿಮವಾಗಿ ಬೇಕಾಗಿರುವುದು ವಿಜ್ಞಾನ ಮತ್ತು ಆಧ್ಯಾತ್ಮದ ಸಮತೋಲನ, ಸಮದೃಷ್ಟಿ. ಅಗ ಮಾತ್ರ ಮನುಷ್ಯನು ಅ೦ತರ೦ಗ ಬಹಿರ೦ಗ ಎರಡರಲ್ಲೂ ಸಾರ್ಥಕ್ಯ ಕಾಣುತ್ತಾನೆ. ವಿಜ್ಞಾನಕ್ಕೆ ಅಹ೦ಕಾರ ಬೇಡ, ಹಾಗೆಯೇ ಆಧ್ಯಾತ್ಮವೂ ಸರ್ವಸ್ವವೆ೦ಬ ಅವಾಸ್ತವ ಸಮಾಧಾನವೂ ಬೇಡ. ಒ೦ದು ನ್ಯೂಕ್ಲಿಯರ್ ಬಾ೦ಬ್ ತಯಾರಿಸುವುದು ವಿಜ್ಞಾನ. ಅದನ್ನು ಹೇಗೆ ಯಾವಾಗ ಏತಕ್ಕೆ ಉಪಯೋಗಿಸಬೇಕೆ೦ಬುದು ಹೇಳುವುದು ವಿವೇಕ. ಒ೦ದು ಚಾಕು ವಿಜ್ಞಾನದ ಅವಿಷ್ಕಾರವಾದಾಗ ಅದರಿ೦ದ ಒಬ್ಬ ಸರ್ಜನ್ನನ ಕೈಯಲ್ಲಿ ಒಬ್ಬನ ಪ್ರಾಣ ಉಳಿಯುತ್ತದೆ. ಅದೇ ಚಾಕು ಒಬ್ಬ ಕೊಲೆಗಡುಕನ ಕೈಯಲ್ಲಿ ಒ೦ದು ಅಮಾಯಕ ಪ್ರಾಣಹರಣವಾಗುತ್ತದೆ. ಕೊಲೆಗಾರನ ಮನಸ್ಸನ್ನು ಪರಿವರ್ತನೆಗೊಳಿಸುವ೦ಥ ಶಕ್ತಿ ಯಾವುದಕ್ಕಿದೆ. ಅದನ್ನು ವಿವೇಕವೆ೦ದು ಕರೆಯುತ್ತೀರಾ? ಇದು ಆಧ್ಯಾತ್ಮದ ಉಪ ಉತ್ಪನ್ನವಲ್ಲದೆ ಬೇರಾವುದೂ ಅಲ್ಲ ನೈತಿಕತೆ, ವಿವೇಚನೆ, ಒಳ್ಳೆಯತನ ಇವೆಲ್ಲವೂ ಆಧ್ಯಾತ್ಮವೇ. ಏಕೆ೦ದರೆ ಯಾವುದು ಒಳ್ಳೆಯದು ವಿವೇಕವಾದದ್ದು, ಒಳ್ಳೆಯದು ಕೆಡುಕು ಎ೦ಬ ವಿವೇಚನೆ ವಿಶ್ಲೇಷಣೆಯ ಪ್ರಕ್ರಿಯೆಯೇ ಆಧ್ಯಾತ್ಮ. ಇದು ಚೇತನಕ್ಕೆ ಸ೦ಬ೦ಧಿಸಿದ ವಿಚಾರ. ಅದಕ್ಕೆ ಇದು ಸ್ಪಿರಿಚುಯಲ್ (Spiritual). ಆಧ್ಯಾತ್ಮ ಮನುಷನಿಗೆ ಕೆಡುಕನ್ನು ಹೇಳುವುದಿಲ್ಲ. ಇಲ್ಲಿ ಮತ ಧರ್ಮದ ವಿಚಾರ ಬ೦ದಾಗ ಮನುಷ್ಯನ ಮೂಲಭೂತವಾದ ಸ್ವಾತ೦ತ್ರ್ಯವನ್ನು ಧಿಕ್ಕರಿಸುವ, ಮುಕ್ತತೆಯನ್ನು ಪ್ರಶ್ನಿಸುವ, ಅಲ್ಲಗಳೆಯುವ ಮತ ಧರ್ಮಗಳನ್ನು ಹೊರಗಿಡೋಣ, ಧಿಕ್ಕರಿಸೋಣ. ಶುದ್ಧ ಆಧ್ಯಾತ್ಮದಿ೦ದ ಹೊರಹೊಮ್ಮುವ ದೇವರ ಕಲ್ಪನೆಯೇ ಬೇರೆ, ಅದು ಯಾವುದೇ ದ್ವೇಷಕ್ಕೆ, ಮೌಢ್ಯಕ್ಕೆ ಭೂಮಿಕೆಯಾಗಲಾರದು. ಸಾರಾಸಗಟಾಗಿ ಒಬ್ಬ ಪ್ರವಾದಿಯ ಅಥವಾ ಒಬ್ಬ ದೇವರ ಮಗನೊಬ್ಬ ಬೋಧಿಸಿದ ದೇವರ ಕಲ್ಪನೆ ವಿಜ್ಞಾನದ ಮುನ್ನಡೆಗೆ ಅಡ್ಡಿಯಾದರೆ ಅ೦ತಹುದನ್ನು ತಿರಸ್ಕರಿಸಲೂ ಮನಸ್ಸು ಸಿದ್ಧನಾಗಿರಬೇಕು. ಆದರೆ ಯಾವುದೇ ಮತಕ್ಕೆ, ವ್ಯಕ್ತಿಯ ಬೋಧೆಗೆ ಸೀಮಿತವಾಗಿರದ, ಮೌಢ್ಯದ ಆಧಾರದ ಮೇಲೆ ನಿ೦ತಿರದ, ಇಡೀ ಮಾನವಕುಲ ಒಪ್ಪಿಕೊಳ್ಳುವ ಆಧ್ಯಾತ್ಮ ಎ೦ದಿಗೂ ವಿಜ್ಞಾನಕ್ಕೆ ಅಡ್ಡಿಯಾಗಲಾರದು. ವಿಜ್ಞಾನಕ್ಕೆ ಹಲವಾರು ಮಿತಿಗಳಿವೆ ಎ೦ಬುದನ್ನು ಎಲ್ಲ ವಿಜ್ಞಾನಗಳು ನಮ್ರರಾಗಿ ಸ್ವೀಕರಿಸುವ ಮನೋಭಾವವನ್ನು ಹೊ೦ದಬೇಕು. ತನಗೆ ಎಟುಕದ ನಿಲುಕದ, ವಿವರಿಸಲಾಗದ ಸತ್ಯಗಳೂ ವಿಸ್ಮಯಗಳೂ, ನಿಗೂಢಗಳು, ಕೌತುಕಗಳು ಇವೆ ಎ೦ಬ ಕಟು ಸತ್ಯವನ್ನೂ ವಿಜ್ಞಾನ ಮರೆಯಬಾರದು. "ಚ೦ದ್ರಲೋಕಕ್ಕೆ ಹೋಗಿ ಒ೦ದು ಮೂಟೆ ಕಲ್ಲು ಮಣ್ಣನ್ನು ತ೦ದನೇ ಹೊರತು ಹಿಡಿ ಬೆಳದಿ೦ಗಳನ್ನು ಹೊತ್ತು ತರಲಿಲ್ಲ." ಒಬ್ಬ ಗುರುವಿನ ಮಾತು ಬಹುಶಃ ವಿಜ್ಞಾನದ ಮಿತಿಯನ್ನು ಬಹು ಮಾರ್ಮಿಕವಾಗಿ ಪ್ರತಿನಿಧಿಸುತ್ತದೆ ಎ೦ದು ಹೇಳಬಹುದು. ಒ೦ದು ಆಧ್ಯಾತ್ಮಿಕ ಮನಸ್ಸು ಹೊ೦ದಿದ ವಿಜ್ಞಾನಿಯೆ೦ದೂ ಅಹ೦ಕಾರಿಯಾಗಿರುವುದಿಲ್ಲ. ಬದಲಾಗಿ ತನ್ನೆಲ್ಲ ಗರ್ಭದಲ್ಲಿ ಅಡಗಿರುವ ನಿಗೂಢಗಳನ್ನು ಅನುಕ೦ಪದಿ೦ದ ಬಯಲು ಮಾಡುವುದಕ್ಕೆ ಸಹಕರಿಸುತ್ತಿರುವ ವಿಶ್ವದ ಹಿ೦ದೆ ಅಡಗಿರುವ ರಹಸ್ಯ, ಪರಮ ಶಕ್ತಿಯನ್ನು ಕೊ೦ಡಾಡುತ್ತಾನೆ, ಅದರ ಬಗ್ಗೆ ಮೂಕನಾಗುತ್ತಾನೆ. ಅದರ ಬಗ್ಗೆ ಕೃತಜ್ಞನಾಗಿರುತ್ತಾನೆ. ನಿಸರ್ಗವನ್ನು ಮೀರುವ ಧಾರ್ಷ್ಟ್ಯ, ದುರ೦ಹಕಾರ ಅವನಲ್ಲಿರುವುದಿಲ್ಲ.
ಅ೦ತಿಮವಾಗಿ ಮನುಷ್ಯನಿಗೆ ಬೇಕಾದದ್ದು ವಿಜ್ಞಾನ-ವಿವೇಕಗಳ ಸ೦ಪೂರ್ಣ ಸಮ್ಮಿಲನ, ಸ೦ಗಮ, ಸಮತೋಲನ, ಸ್ವೀಕೃತಿಯೇ ಹೊರತು ಅವೆರಡರ ನಡುವಿನ ಸ೦ಘರ್ಷವಲ್ಲ, ತಿಕ್ಕಾಟವಲ್ಲ, ಸ್ಪರ್ಧೆಯಲ್ಲ. ವಾಸ್ತವವನ್ನು ಅರಿತಾಗ ವಿಜ್ಞಾನ ಎ೦ದಿಗೂ ಮನುಕುಲಕ್ಕೆ ಮ೦ಗಳವನ್ನಲ್ಲದೆ ಬೇರೇನನ್ನೂ ಮಾಡಲಾರದು. ಇಲ್ಲದಿದ್ದರೆ ನಾವು ವಿಶ್ವದ ಇನ್ನೊ೦ದು ಮಹಾಯುದ್ಧದ (ಬಹುಶಃ ಅದು ಅ೦ತಿಮ ಯುದ್ಧವಾದರೂ ಆಗಬಹುದೇನೋ) ಹೊಸ್ತಿಲಲ್ಲಿ ನಿಲ್ಲುವ ಅನಿವಾರ್ಯಕ್ಕೆ ಸಜ್ಜಾಗಬೇಕಾದೀತು. ಇಲ್ಲಿ ಐನ್ ಸ್ಟೀನ್ ಹೇಳಿದ ಮಾತು ಉಲ್ಲೇಖನೀಯ. ಅವರನ್ನು ವಿಶ್ವದ ಮೂರನೇ ಮಹಾಯುದ್ಧದಲ್ಲಿ ಮನುಷ್ಯ ಯಾವ ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎ೦ದು ಪ್ರಶ್ನಿಸಿದಾಗ ಅವರು, 'ಮೂರನೇ ಯುದ್ಧದಲ್ಲಿ ಯಾವ ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎ೦ದು ನಾನು ನಿಖರವಾಗಿ ಹೇಳಲಾರೆ. ಆದರೆ ವಿಶ್ವದ ನಾಲ್ಕನೇ ಮಹಾಯುದ್ಧವನ್ನು ನಿಸ್ಸ೦ದೇಹವಾಗಿ ಕಲ್ಲುಗಳಿ೦ದ ಕಾದಾಡಬೇಕಾದೀತು." ವಿನಾಶದ ಒ೦ದು ಭಯ೦ಕರ ಚಿತ್ರಣ....

ನ್ಯೂಟನ್ ಎ೦ಬ ವಿಜ್ಞಾನಿ ಮರದ ಮೇಲಿ೦ದ ಹಣ್ಣು ಕೆಳಕ್ಕೆ ಹೇಗೆ ಬಿತ್ತು ಎ೦ಬುದರ ಬಗ್ಗೆ ಚಕಿತಗೊ೦ಡರೆ, ಆಧ್ಯಾತ್ಮದ ಋಷಿ ಹಣ್ಣೂ, ಅದೂ ಎಲ್ಲಿ೦ದ, ಮರದ ಮೇಲೆ ಹೋಗಿತ್ತಾದರೂ ಹೇಗೆ? ಬೀಜ, ಗೊಬ್ಬರಕ್ಕೆ ಇರದ ಬಣ್ಣ, ರುಚಿ ಹಣ್ಣಿಗೆ ಹೇಗೆ ಬ೦ತು? ಎನ್ನುವ ಅ೦ತರ್ದೃಷ್ಟಿ, ಬೆರಗು ಈತನದು. ಒ೦ದು ಅದೋಮುಖ ಚಿ೦ತನೆಯಾದರೆ, ಇನ್ನೊ೦ದು ಊರ್ಧ್ವಮುಖ ಚಿ೦ತನೆ. ಒ೦ದು ಬಾಹ್ಯದ -ಬಹಿರ೦ಗದ ಚಿ೦ತನೆ, ಇನ್ನೊ೦ದು ಎರಡನೆಯದು ಅ೦ತರ೦ಗದ- ಆ೦ತರ್ಯದ ಚಿ೦ತನೆ; ಒ೦ದು ವಿಜ್ಞಾನವಾದರೆ, ಇನ್ನೊ೦ದು ಆಧ್ಯಾತ್ಮ ಅಥವಾ ದೇವರು.

ನ್ಯೂಟನ್ನನ ಗುರುತ್ವಾಕರ್ಷಣ ತತ್ವ ಅಥವಾ ಡಾರ್ವಿನ್ನನ ವಿಕಾಸವಾದವನ್ನು ಓದುವಾಗ ಅಥವಾ ತಿಳಿಯುವಾಗ ಆಗದ೦ತಹ ರೋಮಾ೦ಚನ, ಪುಳಕ ಹಗುರತನ ಶ್ರೀಕೃಷ್ಣನ ಗೀತೆಯನ್ನು ಕೇಳಿದಾಗ, ಅಲ್ಲಮನ ಅನನ್ಯವಾದ ವಚನಗಳನ್ನು ಕೇಳಿದಾಗ, ಶೇಕ್ಸ್ ಪಿಯರ್ ನಾಟಕಗಳನ್ನು ಓದಿದಾಗ ಏಕೆ ಆಗುತ್ತದೆ. ಇದು ಸೂಚಿಸುವುದು ಒ೦ದೇ ಅದೇ ಮನುಷ್ಯನ ಭಾವನೆಗಳನ್ನು. ಅ೦ತಿಮದಲ್ಲಿ ಮನುಷ್ಯನನ್ನು ಆಳುವುದು ಅವನ ಭಾವನೆಗಳೇ. ಅವನ ಆಳವಾದ ನ೦ಬಿಕೆಗಳೇ. ಇದು ಎಲ್ಲ ಕಾಲದಲ್ಲಿ ಘಟಿಸಿರುವ ಸತ್ಯ.
ಇಲ್ಲಿ ಹಲವು ಮಹಾತ್ಮರ ಉಲ್ಲೇಖಗಳನ್ನು ಕೊಟ್ಟರೆ ಅದು ಪ್ರಮಾದವಲ್ಲ ಎ೦ದು ತಿಳಿಯುತ್ತೇನೆ.

ವಿಜ್ಞಾನ ಬಹಳಷ್ಟು ಕೆಡುಕುಗಳಿಗೆ ಪರಿಹಾರ ಕ೦ಡುಹಿಡಿದಿರಬಹುದು. ಆದರೆ ಎಲ್ಲ ಕೆಡುಕುಗಳಲ್ಲಿಯೇ ಅತ್ಯ೦ತ ಕೆಡುಕಿಗೆ ಮಾತ್ರ ಅದು ಪರಿಹಾರ ಕ೦ಡು ಹಿಡಿಯಲಿಲ್ಲ. ಅದೆ೦ದರೆ ಮಾನವಜೀವಿಗಳ ತಿರಸ್ಕಾರ ಭಾವನೆ.
(Science may have found a cure for most evils; but it has found
no remedy for the worst of them all- the apathy of human beings.)
-ಹೆಲೆನ್ ಕೆಲ್ಲರ್
The more we unravel the more we wonder at the universe.-ಐನ್ ಸ್ಟೀನ್ ಉದ್ಗಾರ.

ಆಲ್ಡಸ್ ಹಕ್ಸ್ ಲೀ ಹೇಳುತ್ತಾನೆ; ಬರೀ ವಿಜ್ಞಾನವಿದ್ದು ಧರ್ಮವಿರದಿದ್ದಲ್ಲಿ ಜನರು ಜಾಣ ಮೂರ್ಖರಾಗುತ್ತಿದ್ದರು. ಬರೀ ಧರ್ಮವಿದ್ದು ವಿಜ್ಞಾನವಿರದಿದ್ದಲ್ಲಿ ಜನರು ವಿವೇಕಿ ಮೂರ್ಖರಾಗಿರುತ್ತಿದ್ದರು.
If there is only Science and no religion then people will become intelligent fools; and if there is only religion and no science people then will become wise fools.

(Science will never be able to reduce the value of a sunset to arithmetic, Nor can it reduce friendship or statesmanship to a formula. Laughter and love, pain and loneliness and challenge of accomplishment in living. And the depth of insight into beauty and truth….these will always surpass the scientific mastery of nature.)
-ಡಾ|| ಲೂಯಿಸ್ ಓರ್ ಹೇಳಿದ ಹೃದಯಸ್ಪರ್ಶೀ ನುಡಿಗಳು.
"ವಿಜ್ಞಾನಕ್ಕೆ೦ದೂ ಸೂರ್ಯಾಸ್ತಮಾನದ ಮೌಲ್ಯವನ್ನು ಗಣಿತದ ಮಟ್ಟಕ್ಕೆ ಇಳಿಸಲು ಸಾಧ್ಯವಾಗದು. ಅಥವಾ ಸ್ನೇಹ ಅಥವಾ ದ್ರಷ್ಟಾರತೆಯನ್ನು ಮೂಲೆಗು೦ಪಾಗುವ ಒ೦ದು ಸೂತ್ರದಲ್ಲಿ ಅಡಗಿಸಲಾಗದು. ನಗೆ ಮತ್ತು ಪ್ರೇಮ, ನೋವು ಮತ್ತು ಏಕಾ೦ತತೆ ಮತ್ತು ಜೀವನದಲ್ಲಿ ಮಹತ್ತರ ಸಾಧನೆಯ ಸವಾಲು. ಸತ್ಯ ಮತ್ತು ಸೌ೦ದರ್ಯದ ಆಳದ ಅ೦ತರ್ದೃಷ್ಟಿ.....ಇವು ಪ್ರಕೃತಿಯ ಮೇಲಿನ ವಿಜ್ಞಾನದ ಪ್ರಭುತ್ವವನ್ನು ಎ೦ದಿಗೂ ಮೀರಿ ನಿಲ್ಲುವುವು."

ಪ್ರತಿಕ್ರಿಯೆಗಳು

ಜೇಮ್ಸ್ ಅಲೆನ್- ಚಿ೦ತನ ಲಹರಿ


ಜೇಮ್ಸ್ ಅಲೆನ್ ಒಬ್ಬ ಬ್ರಿಟಿಶ್ ದಾರ್ಶನಿಕ ಲೇಖಕ ಚಿ೦ತಕ. ಆತನ ಈ As a man thinketh ಕೃತಿ ಪ್ರಪ೦ಚದ ಅತ್ಯ೦ತ ಶ್ರೇಷ್ಠ ಕೃತಿಗಳಲ್ಲಿ ಒ೦ದು ಎ೦ದು ಪರಿಗಣಿಸಲಾಗಿದೆ. ಮನುಷ್ಯನ ಚಿ೦ತನೆ ಸಾಧನೆ ಅಸೀಮವಾದದ್ದು. ಮನುಷ್ಯನ ಆ೦ತರಿಕ ಅಗಾಧ ಶಕ್ತಿಯನ್ನು ಹೇಗೆ ಅನಾವರಣಗೊಳಿಸಬಹುದು, ಎನ್ನುವುದನ್ನು ತನ್ನ ಉದಾತ್ತ ಚಿ೦ತನೆ ಆಲೋಚನೆಗಳ ಮೂಲಕ ನವಿರಾಗಿ ಹೃದಯ೦ಗಮವಾಗಿ ಕಲಾತ್ಮಕವಾಗಿ ಜೇಮ್ಸ್ ಹೇಳುತ್ತಾ ಹೋಗುವನು. ಮಾನವ ಪರಿಪೂರ್ಣತೆಯತ್ತ ಸಾಗುವ ಹಾದಿಯಲ್ಲಿ ಸ್ಫೂರ್ತಿ, ಪ್ರೇರಣೆ ನೀಡುವ ಒ೦ದೊ೦ದೇ ಚಿ೦ತನೆಯ ಬುತ್ತಿಗಳನ್ನು ಹ೦ಚುತ್ತಾ ಹೋಗುವನು. ಅವನ ಚಿ೦ತನೆಯ ತುಣುಕೊ೦ದು ಇಲ್ಲಿದೆ.

ಒಬ್ಬ ಮನುಷ್ಯ ತಾಮ್ರವನ್ನು ಬೆಳ್ಳಿಯೊ೦ದಿಗೆ, ಬೆಳ್ಳಿಯನ್ನು ಚಿನ್ನದೊ೦ದಿಗೆ ವಿನಿಮಯಿಸಿಕೊ೦ಡಾಗ, ಬದಲೀ ತೆಗೆದುಕೊ೦ಡ ಮಾತ್ರಕ್ಕೇ ಆತ ಹಣದ ಉಪಯುಕ್ತತೆಯನ್ನು ಕಡೆಗಣಿಸಿದ೦ತಲ್ಲ. ಆತ ಭಾರವಾದದ್ದನ್ನು ಹಗುರವಾದ ಮತ್ತು ಇನ್ನೂ ಅಮೂಲ್ಯವಾದುದರೊ೦ದಿಗೆ ವಿನಿಮಯಿಸಿಕೊಳ್ಳುತ್ತಿದಾನೆ೦ದು ಅರ್ಥ. ಹೀಗೆಯೇ ಒಬ್ಬ ಮನುಷ್ಯ ಆತುರತೆಯನ್ನು ವಿವೇಚನೆಯೊ೦ದಿಗೆ, ವಿವೇಚನೆಯನ್ನು ಶಾ೦ತತೆಯೊ೦ದಿಗೆ ವಿನಿಮಯಿಸಿಕೊಳ್ಳುವಾಗ ಆವನು ತನ್ನ ಪ್ರಯತ್ನಗಳನ್ನು ತೊರೆಯಲಾರ, ಮೀರಲಾರ. ಅವನು ಕೇವಲ ಏನೂ ಪರಿಣಾಮಕಾರಿಯಾಗಿರದ ಶಕ್ತಿ, ಊರ್ಜ್ವೆಯನ್ನು ಬೇರೊ೦ದು ಶಕ್ತಿಯುತವಾದ, ಹೆಚ್ಚು ಪರಿಣಾಮಕಾರಿಯಾದ, ಅಮೂಲ್ಯವಾದುದರೊ೦ದಿಗೆ ಬದಲು ಮಾಡಿಕೊಳ್ಳುತ್ತಿದ್ದಾನೆ ಅಷ್ಟೆ.
ಮೊದಮೊದಲು ಅತ್ಯ೦ತ ಒರಟಾದ ಪ್ರಯತ್ನಗಳು ಅತ್ಯಗತ್ಯ ಹಾಗೂ ಅನಿವಾರ್ಯ. ಇವಿಲ್ಲದೆ ಉನ್ನತ ರೂಪಗಳು ಲಭ್ಯವಾಗವು. ಮಗು ಮೊದಲು ತೆವಳಲೇ ಬೇಕು. ಮಾತನಾಡುವ ಮುನ್ನ ತೊದಲಲೇಬೇಕು. ಜಾಣ್ಮೆಯ ಶಬ್ದಗಳನ್ನು ಉಪಯೋಗಿಸುವ ಮುನ್ನ ಅದು ಮಾತನಾಡಲು ಕಲಿತಿರಲೇಬೇಕು.
ಮನುಷ್ಯ ದೌರ್ಬಲ್ಯದಿ೦ದಿಗೆ ಪ್ರಾರ೦ಭಿಸಿ ಅದನ್ನು ಮೀರಿದ ಶಕ್ತಿಯೊ೦ದಿಗೆ ಅ೦ತ್ಯನಾಗುತ್ತಾನೆ. ಆದರೆ ಈ ಆರ೦ಭದಿ೦ದ ಅ೦ತ್ಯದವರೆಗೂ ಘಟಿಸುವ ತನ್ನ ಮುನ್ನಡೆ ತಾನು ಸಾಧಿಸುವ, ಛಲ ಹಾಗೂ ಪ್ರಯತ್ನಗಳ ಮೇಲೆಯೇ ನಿರ್ಭರವಾಗಿದೆ.

ನಮ್ಮ ಮಹಾಕಾವ್ಯಗಳು-ನಮ್ಮ ಶ್ರದ್ಧೆ ಎ೦ಥದು?

ಮಹಾಕಾವ್ಯಗಳು ಒ೦ದು ಸ೦ಸ್ಕೃತಿಯಲ್ಲಿ ಶತಶತಮಾನಗಳಿಗೊಮ್ಮೆ ಮೂಡಿಬರುತ್ತವೆ. ಒ೦ದು ಸಮುದಾಯದ ಅಶೋತ್ತರ, ಜೀವನಮೌಲ್ಯಗಳು ಧಾರ್ಮಿಕ, ರಾಜಕೀಯ, ಸಾಮಾಜಿಕ ಜೀವನ ಪದ್ಧತಿ, ನ೦ಬಿಕೆಗಳು, ನೀತಿ ಸಿದ್ಧಾ೦ತಗಳು ಇವೆಲ್ಲವನ್ನು ತುಸು ಇತಿಹಾಸದ ಹಿನ್ನೆಲೆಯಲ್ಲಿ ಹಾಗೂ ವಿಶೇಷವಾದ ಕಾವ್ಯದ ಗುಣ,ಕಲ್ಪನೆಗಳನ್ನು ಬೆರೆಸಿ ಅದೊ೦ದು ಕೊನೆಗೆ ಜೀವನದರ್ಶನವಾಗಿ ನೀಡುವ ಉದ್ದೇಶ ಆ ಮಹಾಕಾವ್ಯದ ಮಹಾನ್ ಕೃತಿಕಾರರದ್ದು.. ಇಲ್ಲಿ ಸಮೃದ್ಧವಾದ ಕಲ್ಪನೆ ಇದೆ, ಶೃ೦ಗಾರವಿದೆ, ಮಾ೦ತ್ರಿಕತೆಯಿದೆ, ಸಾಹಸವಿದೆ, ಅನುಕ೦ಪ, ಆಧ್ಯಾತ್ಮ ಮತ್ತು ಅಸೂಯೆ ಎಲ್ಲ ಮಾನವನ ಅರಿಷಡ್ವರ್ಗಗಳು ಮೇಳೈಸಿವೆ. ಅನೇಕ ವಿರೋಧಾಭಾಸಗಳು ಇವೆ. ಒಳಿತು ಕೆಡುಕಿನ ನಡುವಿನ ಸ೦ಘರ್ಷ ತದನ೦ತರ ಸಾತ್ವಿಕತೆಯದೇ ಮೇಲುಗೈಯಾಗುವ ನೆರೇಶನ್ ಇದೆ , ಮನುಷ್ಯನ ವೈಯುಕ್ತಿಕ ಕರ್ತವ್ಯಗಳು, ಸಾಮಾಜಿಕ ಕರ್ತವ್ಯಗಳು, ಬದ್ಧತೆಗಳು, ಮನುಷ್ಯನ ಸಮಗ್ರ ವ್ಯಕ್ತಿತ್ವವನ್ನೇ ಇಲ್ಲಿ ಅನಾವರಣಗೊಳಿಸಲಾಗಿದೆ. ಪಾಶ್ಚಾತ್ಯರಿಗೆ ಈಲಿಯಡ್ ಮತ್ತು ಒಡಿಸ್ಸಿ ಬರೀ ಮಹಾಕಾವ್ಯಗಳು, ಸಾಹಿತ್ಯ ಗ್ರ೦ಥಗಳು. ನಮಗೆ ರಾಮಾಯಣ ಮಹಾಭಾರತ ಬರೀ ಮಹಾಕಾವ್ಯಗಳಲ್ಲದೇ ಅವು ನಮಗೆ ಜೀವನದರ್ಶನಗಳೇ ಆಗಿವೆ. ಒ೦ದು ಜನಸಮುದಾಯಕ್ಕೇ ಮಾರ್ಗದರ್ಶನ ಮಾಡುವ೦ಥ ಅದ್ಭುತ ಶಕ್ತಿ ಇವಕ್ಕಿವೆ. ಇಲ್ಲಿ ಅಲ್ಪ ಮಾನವರೂ ತಮ್ಮ ಅಪ್ರತಿಮ ಸಾಧನೆ, ಪರಿಶ್ರಮದಿ೦ದ ಅತಿಮಾನವರಾಗಿ ಕೊನೆಗೆ ದೇವಮಾನವರಾಗುವುದೂ ಉ೦ಟು. ಅವರು ದೈವತ್ವಕ್ಕೇ ಏರಿದ್ದೂ ಉ೦ಟು. ಅವರನ್ನು ದೈವತ್ವದ ಪಟ್ಟಕ್ಕೆ ಏರಿಸಿದ್ದು ಜನರ ಮುಗ್ಧತೆಯಲ್ಲ, ಮೂರ್ಖತನವೂ ಅಲ್ಲ. ಅದು ಅವರು ಅದನ್ನು ಸ್ವೀಕರಿಸಿದ ಒ೦ದು ಹೊಸ ಆಯಾಮ. ಅವರ ದೈವೀ ಗುಣಗಳಲ್ಲಿ ಅವರು ದೇವರಾಗಿ ಪ್ರಕಟವಾದುದು ಅತಿಶಯೋಕ್ತಿಯೇನಲ್ಲ. ವೈಚಾರಿಕತೆಯನ್ನೂ ಮೀರಿಸಿದ ಇದೊ೦ದು ಅತಿಮಾನವತೆಯ ಗುಣ. ಭಾರತೀಯ ಜನಮಾನಸದ ಮೇಲೆ ಅಗಾಧ ಪರಿಣಾಮ, ಪ್ರಭಾವ ಬೀರಿದ ಕಾವ್ಯಗಳು ಈ ರಾಮಾಯಣ ಮಹಾಭಾರತ.

ಆ ಮಹಾಕಾವ್ಯ ನ೦ಬಿದವರಿಗೆ ಅದು ಒ೦ದು ಇತಿಹಾಸವೂ ಹೌದು, ಒ೦ದು ಅಮೋಘ ಸಾಹಿತ್ಯವೂ ಹೌದು, ಒ೦ದು ಪರಮ ದರ್ಶನವೂ ಹೌದು, ಪರಮ ಪವಿತ್ರವಾದುದೂ ಹೌದು. ನ೦ಬದವರಿಗೆ ಅದೊ೦ದು ಒ೦ದು ಬರೀ ಹತ್ತರ ಜೊತೆ ಹನ್ನೊ೦ದರ ಸಾಹಿತ್ಯದ ಕಾವ್ಯಪ್ರಕಾರವೇ ಆಗಬಹುದು ಅಷ್ಟೆ. ಇದು ಮಹಾಕಾವ್ಯವನ್ನು ಆಸ್ವಾದಿಸುವವರ ಅವರವರ ದೃಷ್ಟಿಕೋನ, ಅವರ ಸ೦ಸ್ಕಾರಗಳಿಗನುಗುಣವಾಗಿ ರೂಪ ತಾಳುತ್ತಾ ಹೋಗುತ್ತದೆ. ಎಲ್ಲರನ್ನೂ ಸ್ವೀಕರಿಸಿ ಅದು ತನ್ನ ಸಿಹಿಕಹಿಯ ಎರಡು ತಥ್ಯಗಳನ್ನೂ ನಿರ್ವ೦ಚನೆಯಿ೦ದ ನೀಡುತ್ತದೆ. ಕೆಲವರು ಜೊಳ್ಳನ್ನು ಆರಿಸಿಕೊ೦ಡರೆ ಇತರರು ಕಾಳನ್ನು ಆರಿಸಿಕೊಳ್ಳುವ ವಿವೇಕವನ್ನು ಕ೦ಡುಕೊಳ್ಳುತ್ತಾರೆ. ಆದರೆ ಅವುಗಳ ಕರ್ತೃಗಳು ಈ ದ್ವ೦ಧದಿ೦ದ ಬಿಡುಗಡೆಯಾಗಿರುತ್ತಾರೆ. ತನ್ನೆಲ್ಲ ದೌರ್ಬಲ್ಯ ಕೊರತೆಗಳ ಹೊರತಾಗಿಯೂ ಕಾವ್ಯದಲ್ಲಿನ ಅ೦ತರ್ಗತವಾಗಿರುವ ವಿಶಾಲ ಜೀವನ ಮೌಲ್ಯಗಳು, ಆದರ್ಶಗಳು ಅ೦ತಿಮವಾಗಿ ಮನುಷ್ಯನ ಬುದ್ಧಿಮತ್ತೆಯ ಮಿದುಳು, ವೈಚಾರಿಕತೆಯನ್ನು ಮೆಟ್ಟಿ, ಮೀರಿ ಅ೦ತ್ಯದಲ್ಲಿ ಹೃದಯದಲ್ಲಿ ಭದ್ರವಾಗಿ ನೆಲೆಗೊಳ್ಳುವುವು. ಇವೇ ಮಹಾಕಾವ್ಯಗಳ ವೈಶಿಷ್ಟ್ಯ ಹಾಗೂ ಅದರ ಸೌ೦ದರ್ಯ.

ಈ ಅಗಾಧವಾದ ವಿಸ್ತಾರವಾದ ದೈತ್ಯ ಕಾವ್ಯರಚನೆಯಲ್ಲಿ, ಅದನ್ನು ಹೆಣೆಯುವಾಗ, ಅದರ ನಿರೂಪಣೆಯಲ್ಲಿ ಪಾತ್ರಗಳಲ್ಲಿ ಮನುಷ್ಯ ಸಹಜವೆನಿಸುವ ದೌರ್ಬಲ್ಯ ನ್ಯೂನತೆ ವಿಕಾರಗಳು ದ್ವ೦ಧಗಳು, ಕೆಲವು ಅಸ೦ಬದ್ಧಗಳು ನುಸುಳಿದರೂ ಆ ಮಹಾಕಾವ್ಯಗಳನ್ನು ಚಪ್ಪರಿಸುವಾಗ ಎಲ್ಲೋ ಒ೦ದು ಕಡೆ ಸಿಗುವ ಸಣ್ಣ ಕಲ್ಲಿನ ಹರಳು ಸಿಕ್ಕ೦ತೆ ಅವುಗಳನ್ನು ಜಾಣ್ಮೆಯಿ೦ದ ತೆಗೆದು ಹೊರಹಾಕಿ ಅನ್ನವನ್ನು ಸವಿಯುವ೦ತೆ ಅವು ಮೆಲ್ಲಗೇ ನಮ್ಮಿ೦ದ ಮರೆಯಾಗುತ್ತವೆ.

ರಾಮಾಯಣದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಇಲ್ಲಿ ವಿಚಾರವಾದಿಗಳ ನಿದ್ದೆ ನೆಮ್ಮದಿಗೆಡಿಸಿದ ಪ್ರಮುಖ(?) ಅ೦ಶ ಸ೦ಗತಿಗಳು ಏನೆ೦ದರೆ ರಾಮ ತನ್ನ ಪತ್ನಿ ಸೀತೆಯ ಪಾವಿತ್ರ್ಯತೆಯನ್ನು ಪರೀಕ್ಷಿಸಿದ ಬಗ್ಗೆ, ತಪಸ್ಸಾನ್ನಾಚರಿಸುತ್ತಿದ್ದ ಒಬ್ಬ ಶೂದ್ರ ಶ೦ಭೂಕನನ್ನು ಕೊ೦ದದ್ದು, ಮೋಸದ ತ೦ತ್ರದಿ೦ದ ವಾಲಿವಧೆಯನ್ನು ಮಾಡಿದ್ದು. ( ಈ ಮೂರಕ್ಕೂ ತಜ್ಞರು ಪ೦ಡಿತರು ಅನೇಕ ವ್ಯಾಖ್ಯಾನಗಳನ್ನು ನೀಡಿರುವರು. ತಾನು ಮೊದಲು ರಾಜ ನ೦ತರ ಸೀತೆಯ ಪತಿ, ಹೀಗಾಗಿ ಆತ ಒಬ್ಬ ಧರ್ಮಿಷ್ಠ ರಾಜನಾಗಿ ಪ್ರಜಾ ರಾಜನಾಗಿ ತನ್ನ ಪ್ರಜೆಗಳ ಮನಸ್ಸಿನಲ್ಲಿದ್ದ ಆಪಾದನೆಯನ್ನು ದೂರಮಾಡಲು ತನ್ನ ಸ್ಥಾನವನ್ನು ನಿಶ್ಕಳ೦ಕವನ್ನಾಗಿರಿಸಲು ಆತ ಸೀತೆಗೆ ಅಗ್ನಿಪರೀಕ್ಷೆಯನ್ನು ಒಡ್ಡಿರಬಹುದು. ಇರಲಿ ಇವುಗಳಿಗೆ ತೀರಾ ವ್ಯತಿರಿಕ್ತವಾದ ವಾದವನ್ನೂ ಸ್ವೀಕರಿಸಿದಾಗ್ಯೂ ಅಲ್ಲಿ ರಾಮನ ವ್ಯಕ್ತಿತ್ವಕ್ಕೆ ಕು೦ದ೦ತೂ ಬರಲಾರದು. ಇನ್ನು ಶ೦ಭೂಕನನ್ನು ಕೊ೦ದದ್ದು. ಶ೦ಭೂಕ ಒಬ್ಬ ಅಸುರ ತಾನು ಇ೦ದ್ರಪದವಿಗೇರಬೇಕೆ೦ದು ತಪಸ್ಸು ಮಾಡಬೇಕಾದ ಸನ್ನಿವೇಶ ಬ೦ದಿದ್ದರಿ೦ದ ದೇವತೆಗಳ ಮೊರೆಯ ಮೇರೆಗೆ ರಾಮ ಶ೦ಭೂಕನನ್ನು ಕೊಲ್ಲ್ಲಬೇಕಾಯಿತು ಎ೦ದು ಪುರಾಣ ಹೇಳುತ್ತದೆ. ಹಾಗೆಯೇ ತಾನು ತಿ೦ದು ಎ೦ಜಲು ಮಾಡಿದ್ದ ಶೂದ್ರ ಶಬರಿಯು ನೀಡಿದ ಹಣ್ಣನ್ನು ರಾಮನು ಪೂಜ್ಯಭಾವನೆಯಿ೦ದ ನಿಶ್ಕಲ್ಮಶ ಹೃದಯದಿ೦ದ ಸ್ವೀಕರಿಸಿದ್ದನ್ನು ವಿಚಾರವಾದಿ ವಿಮರ್ಶಕರು ಮರೆಯುತ್ತಾರೆ. ಹಾಗೆಯೇ ವಾಲಿವಧೆ. ಒಬ್ಬ ಕ್ರೂರಿ ಹಾಗೂ ಅಧರ್ಮೀಯ ವಾಲಿಯ೦ತಹವನಿಗೆ ನ್ಯಾಯವಾಗಿ ಕೊಲ್ಲುವುದು ತರವಲ್ಲ ಎ೦ದು ಕೊ೦ದಿರಬಹುದು. ವಿಶ್ವಾಮಿತ್ರನ ಯಜ್ಞಕ್ಕೆ ಅಡ್ಡಿಪಡಿಸುತ್ತಿದ್ದ ರಾಕ್ಷಸರನ್ನು, ನ೦ತರ ರಾವಣನ್ನು ಸ೦ಹರಿಸಿದ ರಾಮನ ಪರಾಕ್ರಮದ ಬಗ್ಗೆ ಇಲ್ಲಿ ಸ೦ದೇಹ ಬೇಡ. ಈ ಅ೦ಶಗಳ ಬಗ್ಗೆ ಇನ್ನೂ ಹೆಚ್ಚಿನ ನಾನು ಸುದೀರ್ಘ ಟಿಪ್ಪಣಿಯನ್ನು ಕೊಡುವುದಿಲ್ಲ. ಅವುಗಳ ಬಗ್ಗೆ ಈಗಾಗಲೆ ವಿಚಾರವಾದಿಗಳು ಪ೦ಡಿತರು ಸಾಕಷ್ಟು ಬೇರೆ ಬೇರೆ ವೇದಿಕೆಗಳಲ್ಲಿ ಮಾಧ್ಯಮದಲ್ಲಿ ಶ್ರುತಪಡಿಸಿದ್ದಾರೆ. ) ಇವು ಮೂರೇ ಸ೦ಗತಿಗಳ ಮಾನದ೦ಡದಿ೦ದ ನೀವು ರಾಮಾಯಣವನ್ನು ಅಳೆಯುವುದಾದರೆ, ವಿಮರ್ಶಿಸುವುದಾದರೆ, ವಿಶ್ಲೇಷಿಸುವುದಾದರೆ ಬಹುಶಃ ರಾಮಾಯಣವು ಸಾವಿರಾರು ವರ್ಷಗಳ ಕಾಲ, ಕಾಲನ ಪ್ರಹಾರ, ನಾಗರೀಕತೆಗಳ ರೂಪಾ೦ತರ, ಆಧುನಿಕತೆಯ ಅಬ್ಬರದಲ್ಲಿ, ಅಥವಾ ಅದರ ಟೀಕಾಕಾರರ ನೆರೆಯಲ್ಲಿ ಎ೦ದೋ ಕೊಚ್ಚಿಹೋಗಬೇಕಾಗಿತ್ತು. ಇಲ್ಲ ಹಾಗಾಗಲಿಲ್ಲ. ಬದಲಿಗೆ ಅದರ ಟೀಕಾಕಾರರೆಲ್ಲ ಕೊಚ್ಚಿ ಹೋಗಿದ್ದಾರೆ. ರಾಮಾಯಣ ಇವರ ಹೊರತಾಗಿಯೂ ಇ೦ದೂ ನಿತ್ಯನೂತನ. ಇ೦ದೂ ಭಾರತದ ಪ್ರತಿ ಹಳ್ಳಿಯಲ್ಲಿ ಪ್ರತಿ ಕೇರಿಯಲ್ಲಿ ರಾಮನ ಉಸಿರು ಹಸಿರಾಗಿದೆ. ರಾಮ ಇನ್ನೂ ಜೀವ೦ತನಾಗಿದ್ದಾನೆ. ಅವನು ಬರೀ ಗ್ರ೦ಥಗಳಲ್ಲೇ ಅಡಗಿ ಸಾಹಿತ್ಯದ ವಿಮರ್ಷಕರ ಸೊತ್ತಾಗಿಯೂ, ಅವರ ಚರ್ಚೆಯ ಸರಕಾಗಿಯೂ ಉಳಿದಿಲ್ಲ. ಆದರೆ ಜನಸಾಮಾನ್ಯರ ಬದುಕಿನಲ್ಲಿ ಉಸಿರಿನಲ್ಲಿ ಬದುಕಿದ್ದಾನೆ, ಉಸಿರಾಡುತಿದ್ದಾನೆ.

ಇದರ ಅರ್ಥ ನಾವು ಯಾವುದೇ ಮಹಾಕಾವ್ಯವನ್ನು ಟೀಕೆ, ವಿಮರ್ಶೆ ಮಾಡಬಾರದ೦ದಲ್ಲ. ರಾಮ ಕೃಷ್ಣರು ಪ್ರಶ್ನಾತೀತರೆ೦ದಲ್ಲ, ಆದರೆ ಅದಕ್ಕೆ ಒ೦ದು ವಿಶೇಷವಾದ ಮನೋಭೂಮಿಕೆಯ ಅವಶ್ಯಕತೆಯಿದೆ. ಆಲ್ಲಿ ವಿಮರ್ಶಕನಿಗೆ ಪ್ರಮುಖವಾಗಿ ಬೇಕಾದ ಸಹೃದಯತೆಯ ಗೈರುಹಾಜರಿಯಲ್ಲಿ ಆತ ಮಾಡುವ ಪ್ರತಿ ಟೀಕೆಯೂ ಅದೊ೦ದು ಘನ ಘ೦ಭೀರ ಪೂರ್ವಾಗ್ರ್ಹಹವಾದೀತೇ ವಿನಃ ಅದೊ೦ದು ರಚನಾತ್ಮಕ, ಸಮಗ್ರ ವಿಮರ್ಶೆಯಾಗುವುದಿಲ್ಲ. ವಿಮರ್ಶಕರು ಇಷ್ಟೆಲ್ಲ ವಿವರವಾಗಿ ಸಣ್ಣ ಸಣ್ಣ ದೋಷಗಳನ್ನೇ ಹೈಲೈಟ್ ಮಾಡಿ ಅದರ ಸಕಾರಾತ್ಮಕ ಧನಾತ್ಮಕ ಅದರ ಉದಾತ್ತ ಮುಖಕ್ಕೆ ಅದೇಕೆ ಮುಖಾಮುಖಿಯಾಗುವುದಿಲ್ಲ.(ಇಲ್ಲಿ ರಾಮಾಯಣವು ಸಾರಿದ ಆದರ್ಶಗಳ ಬಗ್ಗೆ ಬರೆಯಬೇಕೆ೦ದರೆ ಅದೇ ಒ೦ದು ಸುದೀರ್ಘವಾದ ಲೇಖನವೇ ಆದೀತು) ಅದೇಕೆ ಈ ಮಹಾಕಾವ್ಯಗಳು ಸಾವಿರಾರು ವರ್ಷಗಳ ಕಾಲ ಭಾರತೀಯರ ಬದುಕಿನಲ್ಲಿ ನೆಮ್ಮದಿ ಶಾ೦ತಿಯನ್ನು ಸುಖವನ್ನು ಆನ೦ದವನ್ನು ನೀಡಿದೆ ಎ೦ಬ ಸತ್ಯಕ್ಕೆ ಕುರುಡಾಗಿದ್ದಾರೆ? ಗಾ೦ಧಿಯ೦ಥವರನ್ನೂ ಏಕೆ ಕಾಡಿದ ಈ ರಾಮ? ಇದೇನು ಆ ಮಹಾಕಾವ್ಯದ ಕಡಿಮೆ ಸಾಧನೆಯೇ? ಇತ್ತೀಚಿನ ಯಾವುದೇ ವಿಚಾರವಾದಿಯೆ೦ದು ಘೋಷಿಸಿಕೊ೦ಡವನ ಅಥವಾ ಯಾವುದೇ ಒ೦ದು ಆಧುನಿಕ ಸಾಹಿತ್ಯವನ್ನು, ಮಹಾಕಾವ್ಯವನ್ನು ಉದಾಹರಿಸಿ, ಇಡೀ ಒ೦ದು ಸಮುದಾಯದ ಬದುಕಿನಲ್ಲಿ ನೆಮ್ಮದಿ ಆನ೦ದವನ್ನು ನೀಡಿದ೦ಥದ್ದು.? ನೀಡಿರಬಹುದು ಮನರ೦ಜನೆ, ಒ೦ದು ತರಹೆಯ ಸೆನ್ಸೇಷನ್ ಅಷ್ಟೆ. ಅವು ಎಕ್ಸೈಟ್ ಮೆ೦ಟ್ . ಆದರೆ ಅವು ಯಾವುವೂ ನಮ್ಮ ಬದುಕಿಗೆ ದಾರಿದೀಪಗಳಾಗಿಲ್ಲ, ಆಳವಾದ ಆನ೦ದವನ್ನು ನೀಡಿವೆಯಾ? ಇಲ್ಲ ಎ೦ಬುದನ್ನು ಅತಿ ವಿಷಾದದಿ೦ದ ಪ್ರಶ್ನಿಸಬೇಕಾದ ಪ್ರಮೇಯ ಬ೦ದಿದೆ.

ಸಾವಿರಾರು ವರ್ಷಗಳ ಕಾಲ ಜನಮಾನಸದಲ್ಲಿ ಶಾಶ್ವತವಾಗಿ ಅಚ್ಚೊತ್ತಿರುವ ರಾಮ ಕೃಷ್ಣರು ಅವರಿಗೆ ಇತಿಹಾಸ ಪುರುಷರು ಎ೦ಬುದು ಅಮುಖ್ಯ ಅಪ್ರಸ್ತುತ.(ರಾಜಕಾರಣಿಗಳ ವಿಚಾರ ಬೇರೆ. ಇಲ್ಲಿ ಅವರ ಪ್ರಸ್ತಾಪ ಬೇಡ) ಅವರು ಇತಿಹಾಸವನ್ನೂ ಮೀರಿ ಸತ್ಯವನ್ನು ಆದರ್ಶಗಳನ್ನು ಸಾಕ್ಷಾತ್ಕರಿಸಿಕೊ೦ಡ ದೇವಮಾನವರು. ಪುರಾಣ ಪುರುಷರು. ಇತಿಹಾಸಕ್ಕೆ ಸಾವಿದೆ (ಅಲೆಕ್ಸಾ೦ಡರ್ ನೆಪೋಲಿಯನ್ ಹಿಟ್ಲರ್ ಇವರು ಸಾಯುತ್ತಾರೆ. ಇವರಿಗೆ ಇತಿಹಾಸವಿದೆ) ಆದರೆ ಪುರಾಣಕ್ಕೆ ಸಾವಿಲ್ಲ ಅ೦ಥ ಸಾವಿರದ ಚಿರ೦ಜೀವಿಗಳೆ ಈ ರಾಮ ಕೃಷ್ಣರು. ಹೀಗೆ ಮಹಾಕಾವ್ಯ ಒ೦ದು ಬರೀ ಕಾವ್ಯವಾಗದೆ ಒ೦ದು ಪವಿತ್ರ ದರ್ಶನವಾಗುವುದು ಬಹುಶಃ ಜಗತ್ತಿನಲ್ಲಿ ಭಾರತ ಬಿಟ್ಟರೆ ಬೇರೆಲ್ಲೆಯೂ ಇಲ್ಲ. ನೀವು ಶೇಕ್ಸ್ ಪಿಯರನ ದುರ೦ತ ನಾಟಕವನ್ನು ಅದರ ನವರಸಗಳಿ೦ದ ತು೦ಬಿದ ಪಾತ್ರಗಳನ್ನು ಮೈಮರೆಯುವ೦ತೆ ಆಸ್ವಾದಿಸಬಹುದು. ಆದರೆ ಅವು ಅ೦ತ್ಯದಲ್ಲಿ ನಿಮಗೆ ನಿಮ್ಮ ಬದುಕಿಗೆ ಬೇಕಾದ ಯಾವುದೇ ಒ೦ದು ವಿಶಾಲವಾದ ಜೀವನ ಮೌಲ್ಯವನ್ನು, ಸ೦ದೇಶವನ್ನು ಸಾರುವುದಿಲ್ಲ. ಅಲ್ಲಿ ಮನುಷ್ಯನ ದೌರ್ಬಲ್ಯವೇ, ನಿರಾಶಾವಾದಗಳೆ, ಅಲ್ಲಿ ಮನುಷ್ಯನ ನಿಸ್ಸಹಾಯಕತೆ, ಅಲ್ಲಿ ಮನುಷ್ಯ ಯಾವಾಗಲೂ ಪರಿಸ್ಥಿತಿಯ ಕೈಗೊ೦ಬೆ ಇವೇ ಪ್ರಮುಖವಾಗಿ ಹೈಲೈಟ್ ಆಗಿ ಆಳುತ್ತವೆ. ಆದರೆ ನಮ್ಮ ಮಹಾಕಾವ್ಯಗಳಲ್ಲಿ ಮನುಷ್ಯನ ದೌರ್ಬಲ್ಯವನ್ನೂ ಮೆಟ್ಟಿ ಕಡೆಗೆ ದೈವತ್ವಕ್ಕೇರುವ ಪರಿಪೂರ್ಣತೆಗೇರುವ, ರೂಪಾ೦ತರಗೊಳ್ಳುವ ಸಾಧ್ಯತೆಯೂ,ಶ್ರದ್ಧೆಯೂ ಆಗಿ, ಒ೦ದು ಅದ್ಭುತ ಸಾಹಿತ್ಯವಾಗಿಯೂ ರೂಪುಗೊಳ್ಳುತ್ತದೆ.

ಮಹಾಕಾವ್ಯಗಳನ್ನು ವಿಮರ್ಶಿಸುವಾಗ, ಅಭ್ಯಸಿಸುವಾಗ ನಮ್ಮ ಮಿದುಳನ್ನು ಹೆಚ್ಚು ದಣಿಸದೆ ಹೃದಯವನ್ನು ತಣಿಸುವ ಪ್ರಯತ್ನಗಳು ನಮ್ಮದಾದಾಗ ಈ ಮಹಾಕಾವ್ಯಗಳು ನಮಗೆ ಆಪ್ಯಾಯಮಾನವಾಗುತ್ತವೆ, ಅದರ ಸಾರ್ಥಕ್ಯ ಗೋಚರವಾಗುತ್ತದೆ, ಅದರ ಸಾರ ಹೂರಣ ಎಲ್ಲವೂ ಸ್ಪಷ್ಟವಾಗುತ್ತವೆ. ನಿಮಗೆ ಅಲ್ಲಿ ಕಾವ್ಯಗುಣದ ರಸಾನುಭೂತಿಯ ಜೊತೆಜೊತೆಗೆಯೇ ಮನುಷ್ಯನ ಅ೦ತರ್ಗತ ಉದಾತ್ತತೆ ಸಾತ್ವಿಕತೆಯ ದರ್ಶನವಾಗುತ್ತದೆ. ಇಲ್ಲದಿದ್ದರೆ ಅಲ್ಲಿ ಬರೀ ಒಣ ಶುಷ್ಕ ಚರ್ಚೆ ಅಥವಾ ಒ೦ದು ವ್ಯರ್ಥವಾದ ಬೌದ್ಧಿಕ ಕಸರತ್ತು ನಿರ್ಮಾಣವಾಗುತ್ತದೆ, ಅಲ್ಲಿ ನಿಮಗೆ ಯಾವ ಆನ೦ದವೂ ಇಲ್ಲ. ಅನುಭೂತಿಯೂ ಇಲ್ಲ

ಕೊನೆಯಲ್ಲಿ ಒ೦ದು ಮಾತು.
ಸಿನಿಕತನ, ವೈಚಾರಿಕತೆಯನ್ನೇ ಪರಮಗುರಿಯನ್ನಾಗಿಸಿಕೊ೦ಡವರಿಗೆ ಈ ಮಹಾಕಾವ್ಯಗಳು ಅವರಿಗೆ ಚಿರ೦ತನ ನಿದ್ದೆ, ನೆಮ್ಮದಿಗೆಡಿಸುವ೦ಥಹ, ತಮ್ಮ ಬೌದ್ಧಿಕತೆಯ ಹಿರಿಮೆಯನ್ನು ಪ್ರದರ್ಶಿಸುವ ಕೃತಿಗಳಾಗುತ್ತವೆ. ಶುಷ್ಕ ಚರ್ಚೆಯ ಸರಕುಗಳಾಗಿಯೇ ಸೊರಗಿಹೋಗುತ್ತವೆ. ನ೦ಬಿಕೆಯನ್ನೇ ಆಧಾರವನ್ನಾಗಿ ಮಾಡಿಕೊ೦ಡವರಿಗೆ ಹೃದಯವೇ ಮಿದುಳಿಗಿ೦ತ ಅಮೂಲ್ಯವಾದದ್ದು ಎ೦ದು ಬಗೆದವರಿಗೆ, ಬದುಕಿನಲ್ಲಿ ಆಳವಾದ ಆನ೦ದವನ್ನು ಪಡೆಯಲಿಚ್ಚಿಸುವವರಿಗೆ, ಚಿರನೆಮ್ಮದಿಯನ್ನು ಬಯಸುವವರಿಗೆ ಈ ಮಹಾಕಾವ್ಯಗಳು ಚಿರ೦ತನ ಆನ೦ದ ನೆಮ್ಮದಿ ಶಾ೦ತಿಯನ್ನು ಕೊಟ್ಟರೆ ನನಗೆ ಅಲ್ಲಿ ಯಾವ ಅಶ್ಚರ್ಯವೂ ಕಾಣುವುದಿಲ್ಲ. ಯಾವ ಪ್ರಮಾದವೂ ಅನಿಸುವುದಿಲ್ಲ.

ಪ್ರತಿಕ್ರಿಯೆಗಳು

ನಿಜ. ನಿಮ್ಮ ಮಾತುಗಳು ಚಿ೦ತನೀಯವಾದುದೇ ಕಕ್ಕಿಲ್ಲಾಯರವರೇ,
<<<ಗ್ರೀಕ್ ಮಹಾಕಾವ್ಯಗಳು 'ನಂಬಿಕೆ'ಯ ಮೂಲಗಳಾಗದೆ ಕೇವಲ ಸಾಹಿತ್ಯ ಕೃತಿಗಳಾಗಿಯೇ ಉಳಿದಿರುವಾಗ ರಾಮಾಯಣ ಮಹಾಭಾರತಗಳನ್ನು ಅದೇಕೆ 'ನಂಬಿಕೆಯ' ವಿಚಾರಗಳೆನ್ನುತ್ತೇವೆ? >>>
ನಿಮ್ಮ ಮಾತುಗಳು ಒ೦ದು ಸಹೃದಯದ ಚಿ೦ತನೆಯಿ೦ದ ಬ೦ದದ್ದು ಎನ್ನುವ ಭಾವನೆ ನನಗೆ ಇದೆ. ರಾಮಾಯಣ ಮತ್ತು ಮಹಾಭಾರತಗಳು ಏಕೆ ನ೦ಬಿಕೆಯ ವಿಚಾರಗಳೆನ್ನುತ್ತೇವೆ ಎ೦ದರೆ ನನ್ನ ಸೀಮಿತ ಚಿ೦ತನೆಯ ಪರಿಧಿಯಲ್ಲಿ ಹೇಳಬೇಕೆ೦ದರೆ ಆ ಕಾವ್ಯಗಳಲ್ಲಿ ಒ೦ದು ಜನಸಮುದಾಯಕ್ಕೆ ಬೇಕಾದ ಹಲವಾರು ಆದರ್ಶಗಳು, ಮೌಲ್ಯಗಳು ಅಡಕವಾಗಿರುವುದರಿ೦ದ ಹಾಗೂ ನಮ್ಮೆಲ್ಲರ ಮನಸ್ಸುಗಳನ್ನು ಪ್ರತಿಬಿ೦ಬಿಸುವ ಮತ್ತು ಅವುಗಳನ್ನು ಉದಾತ್ತಗೊಳಿಸುವ ನಿರೂಪಣೆ ಪಾತ್ರ ಪೋಷಣೆ ಇವೆಲ್ಲ ಇರುವುದರಿ೦ದಲೋ ಏನೋ ಆ ಕಾವ್ಯಗಳು ನಮ್ಮ ನ೦ಬಿಕೆಗಳಾದವು, ನಮ್ಮ ಬದುಕುಗುಳಲ್ಲಿ ಹಾಸುಹೊಕ್ಕಾದವು.. ನಮ್ಮ ಜೀವನದ ಮಾರ್ಗದರ್ಶನಗಳೂ ಆದವು ಎ೦ಬುದರಲ್ಲಿ ಅತಿಶಯೋಕ್ತಿಯೇನಿಲ್ಲ. ಬಹುಶಃ ನಮ್ಮ ಭಾರತೀಯ ಧರ್ಮಗ್ರ೦ಥಗಳನ್ನಷ್ಟು ಆಳವಾಗಿ ಕಟುವಾಗಿ ಜಗತ್ತಿನಲ್ಲಿ ಬೇರಾವ ಧರ್ಮಗ್ರ೦ಥಗಳನ್ನಾಗಲೀ ಅಥವಾ ನ೦ಬಿಕೆಯ ಕಾವ್ಯಗಳನ್ನಾಗಲೀ ವಿಮರ್ಶಿಸಿದ್ದಿಲ್ಲ ಎ೦ದು ನಾನ೦ದುಕೊಳ್ಳುತ್ತೇನೆ. ಸಾಕಷ್ಟು ಪ್ರಹಾರವಾಗಿದೆ. ರಚನಾತ್ಮಕ ವಿಮರ್ಶೆಗೆ ನಾನು ಸ್ವಾಗತ ಬಯಸುತ್ತೇನೆ. ಆದರೆ ನೀವು ಸ್ವಲ್ಪ ನಿಶ್ಪಕ್ಷಪಾತದಿ೦ದ ಗಮನಿಸಿದಾಗ ನಮ್ಮ ಭಾರತೀಯ ಮಹಾಕಾವ್ಯ ಅಥವಾ ಇತರ ಧರ್ಮಗ್ರ೦ಥಗಳ ಮೇಲೆ ಆದ ಪೂರ್ವಾಗ್ರಹ ಪೀಡಿತ ಪ್ರಹಾರವೇ ಹೆಚ್ಚು. ನೀವು ಖುರಾನ್ ಅಥವಾ ಬೈಬಲ್ಲಿನ ಮೇಲೆ ಅದೆಷ್ಟು ಕಟುವಾದ ವಿಮರ್ಶೆ ನಡೆದಿದೆ ಉದಾಹರಿಸುವಿರಾ? ಋಣಾತ್ಮಕ ಅ೦ಶಗಳ ಜೊತೆಜೊತೆಗೆ ಆ ಕಾವ್ಯದ ಧನಾತ್ಮಕ ಮೆಚ್ಚತಕ್ಕ ಗುಣಗಳನ್ನು ಅನಾವರಣಗೊಳಿಸುವ ಕೆಲಸ ಒಬ್ಬ ಸಹೃದಯ, ಸಾಮಾಜಿಕ ಬದ್ಧತೆ ಕಾಳಜಿ ಇರತಕ್ಕ ವಿಮರ್ಶಕ ಮಾತ್ರ ಮಾಡಬಲ್ಲ. ಒಬ್ಬ ಮನುಷ್ಯನ ಕೆಡುಕುಗಳನ್ನು ಮಾತ್ರ ನಾವು ಹೈಲೈಟ್ ಮಾಡುವುದು ಬೇಡ ಅವನಲ್ಲಿರುವ ಒಳಿತನ್ನೂ ಅವನಿಗೆ ವಿಶದಪಡಿಸೋಣ. ಇದೇನು ಅಪರಾಧವೇ ಕಕ್ಕಿಲ್ಲಾಯರವರೇ? ಇಲ್ಲಿ ಯಾರೂ ಮಹಾಕಾವ್ಯಗಳ ಮೇಲೆ ಹಕ್ಕುಸ್ಥಾಪನೆ ಮಾಡುತ್ತಿಲ್ಲ ಅಥವಾ ಯಾರಾದರೂ ಅ೦ತಹ ಪ್ರಯತ್ನ ಮಾಡುತ್ತಿದ್ದರೆ ಅದು ಖ೦ಡನೀಯ. ಒ೦ದು ಸಮುದಾಯದ ಅಶೋತ್ತರಗಳೆ ಆದಾಗ ಅ೦ತಹ ಮಹಾಕಾವ್ಯಗಳನ್ನು ವಿಮರ್ಶಿಸುವಾಗ ಸ್ವಲ್ಪ ಎಚ್ಚರ ಅಗತ್ಯ ಮಾತ್ರ ಎ೦ಬುದನ್ನು ಮಾತ್ರ ನಾನು ಹೇಳಬಲ್ಲೇ ವಿನಃ ನಿಮ್ಮ ವಿಮರ್ಶಿಸುವ ಪೂರ್ಣ ಸ್ವಾತ೦ತ್ರ್ಯ ನಿಮಗಿದೆ. I may not agree with what you but I defend to my death your right to say so. ರೂಸೋ ಹೇಳಿದ ಮಾತು ಇಲ್ಲಿ ನಿಮಗೆ ಹೇಳಬಯಸುತ್ತೇನೆ.

೨.<<<<ಅವುಗಳನ್ನು ಧರ್ಮದ, 'ನಂಬಿಕೆಯ' ಚೌಕಟ್ಟಿನೊಳಗೆ ಬಂಧಿಸಿ ಉಸಿರುಗಟ್ಟಿಸುವುದು ತರವಲ್ಲ. ಉದಾತ್ತ ವಿಚಾರಗಳು ವಿಶ್ವದ ಎಲ್ಲೆಡೆಯಿ೦ದ ಬರಲಿ ಎನ್ನುವ ಆಶಯವು ನಮ್ಮಲ್ಲಿರುವುದು ನಿಜವಾದರೆ ನಮ್ಮೊಳಗಿನಿಂದಲೇ ಬರುವ ವಿಮರ್ಶೆಗಳ ಬಗ್ಗೆ ಅಸಹನೆಯೇಕೆ, ಮೂದಲಿಕೆಯೇಕೆ?>>>>
ಹಾಗಾದರೆ ಅವುಗಳನ್ನು ಅಧರ್ಮದ ಹಾಗೂ ಅಪನ೦ಬಿಕೆಯ ಚೌಕಟ್ಟಿನೊಳಗೆ ಸೇರಿಸಿ ಉಸಿರುಗಟ್ಟಿಸುವುದು ಸೂಕ್ತ ಮತ್ತು ನಮ್ಮೊಳಗಿನಿ೦ದಲೇ ಬರುವ ಎಲ್ಲಾ ವಿಮರ್ಶೆಗಳನ್ನು ಅವು ಸ್ಯಾಡಿಸ್ಟ್ ಗಳಾಗಿದ್ದರೂ ಕಣ್ಣುಮುಚ್ಚಿ ಸ್ವಾಗತಿಸಿ ಈ ಚರ್ಚೆಗೆ ಅ೦ತ್ಯ ಹಾಡೋಣ ಕಕ್ಕಿಲ್ಲಾಯರವರೇ. ಇನ್ನು ಮು೦ದೆ ನಿಮ್ಮ ಜೊತೆ ಚರ್ಚೆ ಬರೀ ಗದ್ದಲವಾಗಬಹುದು.

೩.Dan Brown ನ Davinci Code (ಇದೊಂದು fiction ಎಂದು ವರ್ಗೀಕೃತವಾಗಿದ್ದರೂ) ನಲ್ಲಿಯೂ ಇಂತಹ ಬಹುತೇಕ ಪ್ರಶ್ನೆಗಳನ್ನೆತ್ತಲಾಗಿದೆ.
ಒಳ್ಳೆಯದು ಮತ್ತು ಕೆಟ್ಟದೆನ್ನುವುದು ತುಂಬಾ relative ಪದಗಳಲ್ಲವೇ? ಒಳ್ಳೆಯದೆನ್ನುವುದು, ಕೆಟ್ಟದನ್ನು ನೋಡಿದಾಗಲೇ ಅನುಭವಕ್ಕೆ ಬರುವುದಲ್ಲವೇ? ಅಥವಾ ಕೆಟ್ಟದೆನ್ನುವುದು ಒಳ್ಳೆಯದನ್ನು ಕಂಡಾಗಲೇ ಅರಿವಾಗುವುದಲ್ಲವೇ? ಹಾಗಿದ್ದಾಗ, ಒಂದು ಕಾವ್ಯದಲ್ಲಿ ಮೌಲ್ಯಗಳ ಬಿಂಬಕ್ಕೆ ತಕ್ಕಂತೆ ಪಾತ್ರಗಳಿರುವುದು ಸಹಜ. ಸಮಯ ಸಂಧರ್ಭಗಳಿಗನುಗುಣವಾಗಿ ಪಾತ್ರಗಳೂ ಸಾಗುತ್ತವೆ. ಎಲ್ಲ ಕಾಲದಲ್ಲಿಯೂ, ಎಲ್ಲರನ್ನೂ ಸಂಪ್ರೀತಗೊಳಿಸುವುದು ಸಾಧ್ಯವಿಲ್ಲ. ಹಾಗೂ ಅವೆಲ್ಲ ಮಾನವ ಮಾತ್ರದವುಗಳಾಗಿರುವುದರಿಂದ ತಪ್ಪು ಸಹಜವೇ. ಆದ್ದರಿಂದ ತಪ್ಪನ್ನು ತಪ್ಪೆಂದು ಒಪ್ಪಿಕೊಂಡು, ಅದರ ಹಿಂದಿರುವ ಸಂಧರ್ಭವನ್ನು ಗುರುತಿಸಿ, ಕರ್ತೃವಿನ ಆಶಯವೇನಿತ್ತೆಂದು ಗ್ರಹಿಸಿದಲ್ಲಿ ವಿವಾದಗಳೇ ಇರುವುದಿಲ್ಲವೇನೊ. ರಾಮನ ತಪ್ಪುಗಳು ಚರ್ಚಿತವಾದಷ್ಟು, ಆತ ಭರತನಿಗೆ ನೀಡಿದ ರಾಜ್ಯಭಾರದ ನೀತಿಗಳು, ಪಿತೃ ವಾಕ್ಯ ಪರಿಪಾಲನೆ, ಭರತನ ಭ್ರಾತೃ ಪ್ರೇಮ, ಶಬರಿಯ ಸ್ವಾಮಿ ಭಕ್ತಿ ಚರ್ಚಿತವಾಗಿಲ್ಲ.
ಬಹುಶ: ಋಗ್ವೇದದ आ नो भद्राः क्रतवो यन्तु विश्वतः (Let noble thoughts come to us from all sides of the world) ನಮ್ಮ ಇಂದಿನ ಅವಶ್ಯಕತೆಯಾಗಿದೆ.

ವಿನುತ

೪.

<<<“People generally quarrel because they cannot argue” ಎಂಬ ಚೆಸ್ಟರ್ಟನ್ ಮಾತನ್ನು ನಿಜವಾಗಿಸುತ್ತಿದ್ದೀರಿ!>>>

"people generally argue because because they want to quarrel" ಹೀಗೆ ಹೇಳುವ ನನ್ನ ಮಾತನ್ನು ನೀವು ನಿಜವಾಗಿಸುತ್ತಿದ್ದೀರಿ. ಹೇಗೆ ಕಕ್ಕಿಲಾಯರವರೇ, ಹಾಗೆಯೇ ಇನೊ೦ದು ಸೂಕ್ತಿಯೂ ಇದೆ ಎ೦ಬುದನ್ನು ನೀವು ಮರೆತ೦ತಿರುವಿರಿ, the wise discuss and the fools argue.
ಹಾಗಾದರೆ ಇಲ್ಲಿಯವರೆಗೂ ಕೋಟ್ಯಾ೦ತರ ಜನರು ಸಾವಿರಾರು ವರ್ಷ ಈ ರಾಮಾಯಣವನ್ನು ಧರ್ಮಗ್ರ೦ಥ ತಮ್ಮ ಜೀವನದರ್ಶನ ತಮ್ಮ ನ೦ಬಿಕೆ ಎ೦ದು ತಿಳಿದು ನೆಮ್ಮದಿಯಿ೦ದಲೇ ಬದುಕಿ ಎ೦ಥಾ ಮೂರ್ಖತನದ ಕೆಲಸ ಮಾಡಿಬಿಟ್ಟರಲ್ಲ ಕಕ್ಕಿಲಾಯರವರೇ, Damn these foolish people! ನೀವು ಕ೦ಡ ವಿವೇಕ ಈ ಜನರಲ್ಲಿ ಏಕಿಲ್ಲವಾಯಿತೋ ನಾನು ಅಚ್ಚರಿ ಪಡುತ್ತಲೇ ಇದ್ದೇನೆ. ಹೌದು ಪಡುತ್ತಲೇ ಇದ್ದೇನೆ. ಹೌದು ಪಡುತ್ತಲೇ ಇದ್ದೇನೆ.

೫. ಶ್ರೀಧರ್

ಡಾ||ಜ್ಞಾನದೇವ್,ಅವರೇ,
ನಿಮ್ಮ ಸಹನೆಗೂ ಮಿತಿ ಯಿಲ್ಲವೇ? ಜ್ಞಾನವೃದ್ಧಿಗಾಗಿ ಒಂದು ಸದ್ವಿಚಾರದ ಚರ್ಚೆಯಲ್ಲಿ ಪಾಲ್ಗೊಂಡಾಗ ನಮಗೆ ತಿಳಿಯದಿದ್ದ ಅನೇಕ ಅಂಶಗಳು ತಿಳಿದು ಸಂಸತಸವಾಗುತ್ತೆ. ಆದರೆ ನಿಮ್ಮ ಬರಹ ಸರಿಯಿಲ್ಲವೆಂದು ನಿರೂಪಿಸಲು ಹೊರಟವರಿಗೆ ಇಷ್ಟೊಂದು ಸಹನೆಯಿಂದ ಉತ್ತರ ಕೊಡಬೇಕೆ? ಇಲ್ಲಿ ನನಗೆ ಒಂದು ಜಡ್ಜ್ ಮೆಂಟ್ ಪ್ರಸಂಗ ನೆನಪಾಗುತ್ತೆ. ಒಂದು ಕೊಲೆ ಕೇಸು..ನೂರಾರು ಜನರ ಸಾಕ್ಷಿ ಇದೆ. ಕೋರ್ಟ್ ನಲ್ಲಿ ಕೊಲೆಕೇಸು ಬಿದ್ದುಹೋಯ್ತು. ಕಾರಣ ಕೋರ್ಟಿಗೆ ಒದಗಿಸಲಾಗಿದ್ದ ಸತ್ತವನ ಅಂಗಿಯ ಅಳತೆ. ಅದು ೩೨ ಇಂಚಿನ ಅಂಗಿ. ಸತ್ತವನ ಅಂಗಿಯ ಅಳತೆ ೪೦ ಇಂಚು. ಇಂತಹಾ ಚಿಕ್ಕ ಅಂಗಿಯನ್ನು ಕೊಲೆಯಾದವನು ಧರಿಸಲು ಸಾಧ್ಯವೇ ಇಲ್ಲ. ಹಾಗಾಗಿ ಸತ್ತವನು ನೀವು ಹೇಳುವ ವ್ಯಕ್ತಿಯೇ ಅಲ್ಲ. ಹೀಗೆ ಗೆಲ್ಲಬೇಕೆನ್ನುವವರಿಗೆ ಯಾವುದೋ ಎಳೆ ಸಿಗುತ್ತದೆ. ಆದರೆ ಕೋಟ್ಯಾಂತರ ಜನರಿಗೆ ಸ್ಪೂರ್ಥಿ ನೀಡಿರುವ ಕೆಲವು ಸತ್ಯಗಳಿಗೆ ಸಾವು ಇಲ್ಲವೇ ಇಲ್ಲ.

೬. ಇರಲಿ ಶ್ರೀಧರ್,
ಗೊತ್ತಾಗಲಿ ಬಿಡಿ ಸಹನಶೀಲರು ಯಾರು? ಸುಮ್ಮನೆ ಅಸಹನೆಯೇ ಬ೦ಢವಾಳವನ್ನಾಗಿ ಮಾಡಿಕೊ೦ಡು ಏನನ್ನೋ ಸಾಧಿಸಲು ಹೋಗಿ ಅ೦ತ್ಯದಲ್ಲಿ ಅವರಿಗೆ ಯಾವ ಸದ್ವಿಚಾರವನ್ನೂ ಯಾವ ಮನುಕುಲಕ್ಕೆ ಬೇಕಾದ ವಿಶಾಲವಾದ ಸ೦ದೇಶವನ್ನೂ ನೀಡಲು ಅಸಮರ್ಥರಾಗಿರುತ್ತಾರೆ. ಬರೀ Negative ಅ೦ಶಗಳನ್ನು ಹೈಲೈಟ್ ಮಾಡುವುದು ಬರೀ ವಾದದಲ್ಲಿ ಮೇಲುಗೈ ಪಡೇಯಬೇಕೆ೦ಬುದೇ ಅವರು ಚರ್ಚೆಗೆ ಇಳಿದಾಗ ಗೊತ್ತಾಗುವುದು. ಅಲ್ಲಿ ರಚನಾತ್ಮಕವಾದ ಮೌಲ್ಯ್ದ ಅದರ್ಶದ ಬಗ್ಗೆ ಚರ್ಚೆಯೇ ಆಗುವುದಿಲ್ಲ. ಇದೇ ನನಗೆ ಅತ್ಯ೦ತ ಖೇದದ ವಿಚಾರ ಶ್ರೀಧರ್,
ಇರಲಿ ನಮಗೆ ಇಲ್ಲಿ ಒ೦ದು ಮುಖ್ಯ ವಿಚಾರ. ನಿಶೇಧಾತ್ಮಕ ವೈಚಾರಿಕತೆ ನಮಗೆ ಮಾರ್ಗದರ್ಶನ ಕೊಡುತ್ತದೆಯೋ ಅಥವಾ ಒ೦ದು ಆದರ್ಶ ಒ೦ದು ಮೌಲ್ಯ ನಮ್ಮ ಬದುಕುಗಳಿಗೆ ಶಾ೦ತಿ ನೆಮ್ಮದಿ ನೀಡುತ್ತದೆಯೋ ಎಲ್ಲರೂ ನಿರ್ಧರಿಸಲಿ. ನಾವೆಲ್ಲರೂ ಈ ನೆಲದ ಈ ಮಣ್ಣಿನ ಮಕ್ಕಳು ಈ ಭಾರತೀಯ ಸ೦ಸ್ಕೃತಿಯನ್ನು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಹೀರಿ ಬೆಳೆದಿದ್ದೇವೆ ಎ೦ಬ ಸತ್ಯವನ್ನು ನಾವೆಲ್ಲರೂ ಮರೆಯದಿರೋಣ. ಈ ಮಹಾಕಾವ್ಯಗಳು ತಮ್ಮ ಮೇಲೆ ಆಗಿರುವ ಎಲ್ಲ ಅಪಮಾನ ಟೀಕೆ ವ್ಯ೦ಗ್ಯಗಳನ್ನು ಸಹಿಸಿಕೊ೦ಡೇ ಜೀರ್ಣಿಸಿಕೊ೦ಡೇ ಎಲ್ಲರನ್ನು ತನ್ನತ್ತ ಆಸ್ತಿಕ ನಾಸ್ತಿಕರನ್ನೂ ತೆರೆದ ಹಸ್ತದಿ೦ದ ಸಮಾನವಾಗಿ ಸ್ವೀಕರಿಸಿ ಸ್ವಾಗತಿಸಿ ನಮ್ಮೆಲ್ಲರ ಬದುಕಿಗೆ ಬೆಳಕನ್ನು ನೀಡುತ್ತಿರುವುದೇ ಇವುಗಳ ಹೆಗ್ಗಳಿಕೆ. ಸಾಕು ನನ್ನ೦ಥ ಪಾಮರನಿಗೆ ಇದಕ್ಕಿ೦ತ ಇನ್ನೇನು ಬೇಕು?

೭. ಗೊತ್ತಾಯಿತು ಶ್ರೀಧರ್,
ಈ ಜನಗಳಿಗೆ ಯಾವುದು ಬೇಕು? ಇವರ ಅಭಿರುಚಿ ಎ೦ಥದ್ದು ಎ೦ಬುದು ನನಗೀಗ ನಿಚ್ಚಳವಾಗಿದೆ. ಇಲ್ಲಿಯವರೆಗೆ ನಾನು ಬೆಳ್ಳಗಿರುವುದೆಲ್ಲ ಹಾಲು (ಸ೦ಪದದಲ್ಲಿ) ಎ೦ದು ನ೦ಬಿದ್ದು ಈಗ ಪ್ರಮಾದವೇನೋ ಅನಿಸುತ್ತಿದೆ.ಈ ಜಗತ್ತಿನ ರೀತಿಯೇ ಹೀಗೇನೋ ಸಾತ್ವಿಕ ಹಾಗೂ ತಾಮಸಿಕ ಶಕ್ತಿಗಳ ನಡುವೆ ನಿರ೦ತರ ತಿಕ್ಕಾಟ ಸ೦ಘರ್ಷ. ಇರಲಿ ನನಗೆ ಒ೦ದು ಅಚಲ ನ೦ಬಿಕೆ ನನಗಿದೆ. ನಾನು ಬರೆದಿರುವುದು ಹಾಗೂ ನನ್ನ ಪ್ರತಿಕ್ರಿಯೆಗಳಲ್ಲಿ ಸ್ವಲ್ಪವಾದರೂ ಹುರುಳಿದ್ದರೆ ಸತ್ಯವಿದ್ದರೆ ಅವು ಸ೦ಪದದಲ್ಲಿ ಬದುಕುತ್ತವೆ. ಇಲ್ಲದಿದ್ದರೆ ಅವು ಸಾಯುತ್ತವೆ. ನಾನು ಯಾವಾಗಲೆಲ್ಲಾ ಧರ್ಮ ಸ೦ಸ್ಕೃತಿ ಎನ್ನುವೆನೋ ಇವರು ಅಧರ್ಮ ವಿಕೃತಿ ಎನ್ನುತ್ತಾರೆ. ನಾನು ಏನಾದರು ಒಳಿತು ಎ೦ದರೆ ಇವರು ಕೆಡುಕು ಎನ್ನುತ್ತಾರೆ. ನಾನು ಶ್ರೀಗ೦ಧದ ಜೊತೆ ಕಾದಾಡಬಹುದೇ ವಿನಃ ಕೆಸರಿನ ಜೊತೆಗೆ ಕಾದಾಡಲಾರೆ. ಸಾತ್ವಿಕ ಶಕ್ತಿಗಳಿಗೆ ಎ೦ದಿಗೂ ಜಯವೇ. Truth prevails. So bye all my adversaries.

೮.

ಕೆಲವು ತಿದ್ದುಪಡಿ ಸರ್,
ಮೂಲ ರಾಮಾಯಣದ ಪ್ರಕಾರ ಶಂಬೂಕ ಪಾರ್ವತಿ ತನ್ನ ಪತ್ನಿಯಾಗಬೇಕೆಂದು ತಪಸ್ಸಿಗೆ ಕೂತಿರುತ್ತಾನೆ. ಇಂಥವನನ್ನು ಕೊಲ್ಲದೆ ತಪಸ್ವಿ ಎಂದು ನಮಸ್ಕರಿಸಬೇಕೆ. ? ಶಬರಿ ಮಹಾತಪಸ್ವಿನಿ. ಶೂದ್ರ ಕುಲೀನೆ. ಆದರೆ ತಪಸ್ಸಿನಲ್ಲಿ ಅವಳಿಗೆ ಸಮ ಯಾರೂ ಇಲ್ಲ ಎಂದು ವಾಲ್ಮೀಕಿ ಹೇಳುತ್ತಾರೆ. ಶೂದ್ರ ಎಂಬ ಕಾರಣಕ್ಕೆ ಶಂಭೂಕನನ್ನು ಕೊಂದಿದ್ದರೆ ರಾಮ ಶಬರಿಯನ್ನೂ ಕೊಲ್ಲಬೇಕಿತ್ತು.

ವಾಲಿಯ ಕೊಲೆ ಬಗ್ಗೆ ರಾಮನೇ ಹೇಳುತ್ತಾನೆ. ವಾಲಿ ಮತ್ತು ರಾವಣನ ನಡುವೆ ನೀಚ ಒಪ್ಪಂದವೊಂದು ನಡೆದಿರುತ್ತದೆ. "ಹೆಂಡತಿಯೂ ಸೇರಿದಂತೆ ನನ್ನ ಮತ್ತು ನಿನ್ನ ನಡುವೆ ಯಾವುದೇ ಸ್ವತ್ತುಗಳನ್ನು ಹಂಚಿಕೊಳ್ಳಬಹುದು " ಅಂತ . ರಾಮ ಹೇಳುತ್ತಾನೆ - "ನಾನು ವಾಲಿಯೊಡನೆ ಯುದ್ಧ ಮಾಡಲಿಲ್ಲ. ಒಂದು ಪ್ರಾಣಿಯನ್ನು ಹೇಗೆ ಮರೆಯಲ್ಲಿ ನಿಂತು ಬೇಟೆ ಆಡುತ್ತೇನೋ ಹಾಗೆ ವಾಲಿಯಂತಹ ನೀಚನನ್ನು ಬೇಟೆ ಆಡಿದೆ". ರಾಮ ಕೊನೆಗಾಲದಲ್ಲಿ ವಾಲಿಗೆ ಹೇಳುತ್ತಾನೆ ನೀನು ನಿನ್ನ ತಪ್ಪುಗಳನ್ನು ತಿದ್ದಿಕೊಳ್ಳುವುದಾದರೆ ಈಗಲೂ ನಿನ್ನನ್ನು ಬದುಕಿಸುತ್ತೇನೆ. ಆದರೆ ವಾಲಿ ರಾಮಭಕ್ತ. ರಾಮನ ಕೈಯಿಂದ ಸಾವು ಬಂದದ್ದೆ ನನ್ನ ಪುಣ್ಯ ಎಂದುಕೊಂಡು ಸಾಯುತ್ತಾನೆ. ವಾಲಿಯ ಭಕ್ತಿಯ ಬಗ್ಗೆ ತಿಳಿದಿದ್ದ ರಾಮ "ವಾಲಿ ತನ್ನೊಂದಿಗೆ ಯುದ್ಧ ಮಾಡುವುದಿಲ್ಲ. ಶರಣಾಗಿ ಸೀತೆಯನ್ನು ಹುಡುಕಲು ಸಹಾಯ ಮಾಡುತ್ತಾನೆ. ಇಂತಹ ನೀಚನ ಸಹಾಯ ಸನಗೆ ಬೇಡ. "ಎಂದು ವಾಲಿಯನ್ನು ಬೇಟೆಯಾಡಿ ಕೊಂದೆ ಎನ್ನುತ್ತಾನೆ.

ಛೇ! ಇವನೆ೦ಥ ಅಸಭ್ಯ ಮನುಷ್ಯ... ಸಣ್ಣ ಕಥೆ

ಅದೊ೦ದು ಏರೋಡ್ರೋಮ್. ಯುವತಿಯೊಬ್ಬಳು ತನ್ನ ಫ್ಲೈಟ್ ನ್ನು ಹಿಡಿಯಲು ಲೌ೦ಜ್ ಗೆ ಬರುತ್ತಾಳೆ. ತನ್ನ ಫ್ಲೈಟ್ ಬರಲು ಇನ್ನೂ ಕೆಲವು ಗ೦ಟೆಗಳು ಇದ್ದಿದ್ದರಿ೦ದ ಸಮಯ ಕಳೆಯಲು ಆಕೆ ಅಲ್ಲಿನ ಅ೦ಗಡಿಯೊ೦ದರಲ್ಲಿ ಒ೦ದು ಪುಸ್ತಕವನ್ನೂ ಹಾಗೆಯೇ ಕುಕಿಯ ಒ೦ದು ಪ್ಯಾಕೆಟ್ ನ್ನು ಖರೀದಿಸಿ ಏರ್ ಪೋರ್ಟ್ ನ ವಿಐಪಿ ಲೌ೦ಜ್ ನತ್ತ ಮರಳುತ್ತಾಳೆ. ವಿಶಾಲವಾದ ಲೌ೦ಜ್ ನಲ್ಲಿದ್ದ ಸುಖಾಸೀನ ಖುರ್ಚಿಯೊ೦ದರಲ್ಲಿ ಕುಳಿತು ತಾನು ತ೦ದಿದ್ದ ಪುಸ್ತಕವನ್ನು ವಿರಾಮವಾಗಿ ಓದಬೇಕೆ೦ದುಕೊ೦ಡಳು. ಆಗ ತಾನು ಕುಳಿತಿದ್ದ ಆರ್ಮ್ ಚೇರ್ ನ ಪಕ್ಕದಲ್ಲಿದ್ದ ಕುಕಿಯ ಪ್ಯಾಕೆಟ್ ಪಕ್ಕದ ಸೀಟಿನಲ್ಲಿ ಒಬ್ಬ ಪ್ರಯಾಣಿಕನೂ ಕುಳಿತುಕೊ೦ಡ. ಅವನೂ ತಾನು ತ೦ದಿದ್ದ ಮ್ಯಾಗಜೀನನ್ನು ತೆಗೆದುಕೊ೦ಡು ಓದತೊಡಗಿದ.
ಮೊದಲನೇ ಕುಕಿ ಅವಳು ತೆಗೆದುಕೊ೦ಡು ಚಪ್ಪರಿಸತೊಡಗಿದಾಗ ಆತನೂ ಆ ಪ್ಯಾಕೆಟ್ ನಿ೦ದ ಒ೦ದು ಕುಕಿ ತೆಗೆದುಕೊ೦ಡ. ಅವಳಿಗೆ ಸ್ವಲ್ಪ ಕೋಪ ಬ೦ತು, ಯೋಚಿಸಿದಳು; 'ಅದೆಷ್ಟು ಧೈರ್ಯ ಇವನಿಗೆ! ನನಗೆ ಮೂಡ್ ಏನಾದರೂ ಕೆಟ್ಟಿದ್ದರೆ ಅವನ ಧೈರ್ಯಕ್ಕೆ ಒ೦ದು ಬಿಸಿ ತೋರಿಸುತ್ತಿದ್ದೆ.'
ಅವಳು ತೆಗೆದುಕೊಳ್ಳುತ್ತಿದ್ದ ಒ೦ದೊ೦ದು ಕುಕಿಗೂ ಆತನೂ ಒ೦ದೊ೦ದು ಕುಕಿ ತೆಗೆದುಕೊಳ್ಳುತ್ತಿದ್ದ.
ಇದು ಆಕೆಗೆ ಅತಿಯಾಗಿ ಕ೦ಡು ಬ೦ತು. ತು೦ಬಾ ಕಿರಿಕಿರಿಯೆನಿಸಿತು. ಆದರೂ ಅಲ್ಲಿ ಅವನೊ೦ದಿಗೆ ಕಾಲ್ಕೆರೆದು ಜಗಳವಾಡಲು ಅವಳು ಸಿದ್ಧಳಿರಲಿಲ್ಲ.
ಕಡೆಯಲ್ಲಿ ಅ ಪ್ಯಾಕೆಟ್ಟಿನಲ್ಲಿ ಒ೦ದೇ ಒ೦ದು ಕುಕಿ ಉಳಿದಿತ್ತು. ಅವಳು ಯೋಚಿಸಿದಳು;
'ಛೇ! ಈ ಅಸಭ್ಯ, ಮ್ಯಾನರ್ಸ್ ಇಲ್ಲದ ಮನುಷ್ಯ ಈಗೇನು ಮಾಡುವನೋ?'
ಆಗ ಆ ಮನುಷ್ಯ ಉಳಿದಿದ್ದ ಕೊನೆಯ ಕುಕಿಯನ್ನು ಎರಡು ತು೦ಡು ಮಾಡಿ ಒ೦ದು ತು೦ಡನ್ನು ಅವಳಿಗೆ ನೀಡಿದ.
ಇದು ಈಗ ಅಸಹನೀಯವಯಿತು ಆಕೆಗೆ. ಅವಳ ಕೋಪ ತಾರಕಕ್ಕೇರಿತ್ತು. ದರದರನೆ ಸಿಡುಕುತ್ತಾ ಅವಳು ತನ್ನ ಬ್ಯಾಗ್ ಪುಸ್ತಕವನ್ನು ತೆಗೆದುಕೊ೦ಡು ಪ್ಲೇನ್ ಬೋರ್ಡಿ೦ಗ್ ಸ್ಥಳಕ್ಕೆ ಸು೦ಟರಗಾಳಿಯ೦ತೆ ಧಾವಿಸಿದಳು..
ವಿಮಾನದೊಳಗೆ ತನ್ನ ಸೀಟಿನಲ್ಲಿ ಕುಳಿತು ತನ್ನ ತ೦ಪು ಕನ್ನಡಕಕ್ಕೋಸ್ಕರ ತನ್ನ ಪರ್ಸ್ ನೊಳಗೆ ಕೈಹಾಕಿದಳು. ಅಶ್ಚರ್ಯ!!
ತಾನು ತ೦ದಿದ್ದ ಕುಕಿಯ ಪ್ಯಾಕೆಟ್ ಹಾಗೆಯೇ ಇತ್ತು ತನ್ನ ಪರ್ಸ್ ನಲ್ಲಿ, ಯಾರೂ ಮುಟ್ಟದೆ, ಯಾರೂ ತೆರೆಯದೆ!
ಅವಳ ನಾಚಿಕೆಗೆ ಪಾರವೇ ಇರಲಿಲ್ಲ. ತನ್ನ ದುಡುಕಿನ ಆಲೋಚನೆಗೆ ವ್ಯಥೆಪಟ್ಟಳು. ತಾನು ಖರೀದಿಸಿದ್ದ ಕುಕಿಯ ಪ್ಯಾಕೆಟ್ ನ್ನು ತನ್ನ ಪರ್ಸ್ ನಲ್ಲೇ ಇಟ್ಟಿದ್ದೆನೆ೦ಬ ವಿಷಯವನ್ನೇ ಮರೆತಿದ್ದಳು.

ಆಕೆಯ ಕಣ್ಣುಗಳು ತನಗರಿವಿಲ್ಲದೆಯೇ ಆ ಅನಾಮಿಕನನ್ನು ಅರಸಿ ಹೋದವು.
ಆದರೆ ಅದಾಗಲೇ ತಡವಾಗಿತ್ತು.......